ದಾಬಸ್ಪೇಟೆ: ಕುಲುವನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿ.ಪಂ. ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ಅವರು ಮಂಗಳವಾರ ಕಚೇರಿಗೆ ಭೇಟಿ ನೀಡಿ ಕಡತ ಪರಿಶೀಲಿಸಿದರು.
ಪಿಡಿಒ, ಸಿಬ್ಬಂದಿವರ್ಗ ಹಾಗೂ ಸದಸ್ಯರಿಂದ ಮಾಹಿತಿ ಪಡೆದರು.
‘14ನೇ ಹಣಕಾಸು, ಬೀದಿ ದೀಪಗಳ ಖರೀದಿ, ತೆರಿಗೆ ಪರಿಷ್ಕರಣೆ, ಇ-ಖಾತೆ, ಡಿಸಿ ಬಿಲ್ ಇತ್ಯಾದಿ ಪಂಚಾಯಿತಿಗೆ ಸೇರಿದ ಅನುದಾನ ಬಳಕೆ, ಕಾಮಗಾರಿ ನಿರ್ವಹಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಕ್ರಮ ಎಸಗಿದ್ದಾರೆಂಬ ದೂರುಗಳು ಸಾಕಷ್ಟು ಬಂದಿದ್ದವು. ಆ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಮೇಲ್ನೋಟಕ್ಕೆ ಅಂತಹ ಅಕ್ರಮಗಳು ಕಂಡು ಬಂದಿಲ್ಲ. ಮುಂದೆ ಅಧಿಕಾರಿಗಳ ಸಮೇತ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಾರ್ವಜನಿಕರು ಇನ್ನಷ್ಟು ಸಮರ್ಪಕ ದಾಖಲೆ ಕೊಟ್ಟರೆ ಮೇಲಧಿಕಾರಿಗಳಿಂದ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಯಮ್ಮ ಹೇಳಿದರು.
ಗ್ರಾ.ಪಂ. ಸದಸ್ಯೆ ನಾಗರತ್ನಾ ಸುರೇಶ್ ಪ್ರತಿಕ್ರಿಯಿಸಿ, ‘ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಲೋಕಾಯುಕ್ತ ಮತ್ತು ಎಸಿಬಿಗೆ ದೂರು ನೀಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.