ಬೆಂಗಳೂರು: ಅಕ್ರಮ ಜಾಹೀರಾತು ಫಲಕಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯರು ಕೌನ್ಸಿಲ್ ಸಭೆಗಳಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದರೂ ಅವುಗಳ ಮೇಲೆ ಇದುವರೆಗೆ ಪೂರ್ಣವಾಗಿ ನಿಷೇಧ ವಿಧಿಸಲು ಸಾಧ್ಯವಾಗಿಲ್ಲ. `ಈ ಸಂಬಂಧ ಬಿಬಿಎಂಪಿ ರೂಪಿಸಿದ ನಿಯಮಾವಳಿಗೆ ರಾಜ್ಯ ಸರ್ಕಾರದ ಒಪ್ಪಿಗೆ ದೊರೆಯದಿರುವುದೇ ಇದಕ್ಕೆ ಕಾರಣವಾಗಿದೆ' ಎಂದು ಅಧಿಕಾರಿಗಳು ಹೇಳುತ್ತಾರೆ.
`ರಾಜ್ಯ ಸರ್ಕಾರದ ಬೆಂಬಲ ಇಲ್ಲದೆ ಅಕ್ರಮ ಜಾಹೀರಾತು ಫಲಕಗಳ ಮೇಲೆ ಸಂಪೂರ್ಣ ನಿಷೇಧ ಕಷ್ಟದ ಕೆಲಸ. ದೊಡ್ಡ ರಾಜಕೀಯ ಲಾಬಿಯೇ ಇದರ ಹಿಂದಿದೆ . ಫಲಕ ತೆರವುಗೊಳಿಸುವ ಬಿಬಿಎಂಪಿ ಸಿಬ್ಬಂದಿಗೆ ಕೊಲೆ ಬೆದರಿಕೆ ಬಂದ ಘಟನೆಗಳು ನಡೆದಿವೆ' ಎಂದರು.
`ಚೆನ್ನೈ ಹಾಗೂ ನವದೆಹಲಿ ಮಾದರಿಯಲ್ಲೇ ಅಕ್ರಮ ಜಾಹೀರಾತು ಫಲಕ ನಿಷೇಧಕ್ಕೆ ಬಿಬಿಎಂಪಿ ಕೂಡ ನಿಯಮಾವಳಿ ಸಿದ್ಧಪಡಿಸಿದೆ.
ಆದರೆ, ರಾಜಕೀಯ ಲಾಬಿಯಿಂದ ಅದಕ್ಕೆ ಇದುವರೆಗೆ ಅನುಮತಿ ಸಿಕ್ಕಿಲ್ಲ. ಕಳೆದ ಎರಡು ತಿಂಗಳಲ್ಲಿ 2,500ಕ್ಕೂ ಅಧಿಕ ಫಲಕ ತೆರವುಗೊಳಿಸಿದ್ದೇವೆ. ಆದರೆ, ರಾಜಕೀಯ ಬೆಂಬಲದಿಂದ ಅವುಗಳನ್ನು ಮತ್ತೆ ಅಳವಡಿಸಲಾಗಿದೆ' ಎಂದು ವಾಸ್ತವಾಂಶವನ್ನು ಬಿಚ್ಚಿಡುತ್ತಾರೆ. `ಅಕ್ರಮ ಫಲಕಗಳ ಮೇಲೆ ನಿಗಾ ಇಡಲು 2007ರಲ್ಲಿಯೇ ಪ್ರತಿಯೊಂದು ವಲಯದಲ್ಲಿ ಕಾರ್ಯಪಡೆ ರಚಿಸಲಾಗಿತ್ತು. ಅವುಗಳು ಯಾವುವೂ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿಲ್ಲ ಎಂದು ದೂರುತ್ತಾರೆ.
ಭೌಗೋಳಿಕ ಮಾಹಿತಿ ವ್ಯವಸ್ಥೆ ಮೂಲಕ ಆಯಾ ಪ್ರದೇಶದಲ್ಲಿ ಇರುವ ಜಾಹೀರಾತು ಫಲಕಗಳು ಮತ್ತು ನೋಂದಣಿಯಾದ ಫಲಕಗಳನ್ನು ತುಲನೆ ಮಾಡಿ, ಅಕ್ರಮ ಪತ್ತೆ ಹಚ್ಚುವ ಹೊಸ ವ್ಯವಸ್ಥೆಯನ್ನು ಬಿಬಿಎಂಪಿ ಜಾರಿಗೊಳಿಸಲು ಉದ್ದೇಶಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,594 ನೋಂದಣಿಯಾದ ಫಲಕಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.