ಬೆಂಗಳೂರು: `ಸೋಮೇಶ್ವರ ನಗರದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಸಲೀಂ ಮತ್ತು ಅವರ ಕುಟುಂಬದ ಸದಸ್ಯರು ಕೋರ್ಟ್ನಿಂದ ತ್ವರಿತವಾಗಿ ನಿರೀಕ್ಷಣಾ ಜಾಮೀನು ಪಡೆಯಲು ಅಧಿಕಾರಿಗಳಿಂದಲೇ ಸಹಕಾರ ಸಿಕ್ಕಿದೆ' ಎಂದು ಬಿಜೆಪಿ ಆಪಾದಿಸಿದೆ.
ಪಕ್ಷದ ಸಹ ವಕ್ತಾರ ಅಶ್ವತ್ಥನಾರಾಯಣ್ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
`ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆಯಲು ತನಿಖಾಧಿಕಾರಿ, ಅವರೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇದೆ. ಸರ್ಕಾರಿ ಅಭಿಯೋಜಕರು ಪರಿಣಾಮಕಾರಿ ವಾದ ಮಂಡಿಸದೇ ಇರುವುದೂ ಕಾರಣ' ಎಂದು ದೂರಿದ್ದಾರೆ.
`ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಮೇಲ್ಮನವಿ ಸಲ್ಲಿಸಿ, ಮುಖ್ಯ ಆರೋಪಿಯನ್ನು ಜೈಲಿಗೆ ತಳ್ಳಬೇಕು. ತನಿಖಾಧಿಕಾರಿ ಮತ್ತು ಸರ್ಕಾರಿ ಅಭಿಯೋಜಕರನ್ನು ಅಮಾನತು ಮಾಡಬೇಕು' ಎಂದು ಆಗ್ರಹಿಸಿದ್ದಾರೆ.
`ಅನುಮೋದಿತ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಲ್ಲದೆ ಅತ್ಯಂತ ಕಳಪೆ ಗುಣಮಟ್ಟದ ಪದಾರ್ಥ ಬಳಸಿದ್ದರ ಪರಿಣಾಮ ಕಟ್ಟಡ ಕುಸಿದು ದುರ್ಘಟನೆ ಸಂಭವಿಸಿದೆ. ಇಷ್ಟಾದರೂ ಸಲೀಂ ಕಾನೂನಿನ ಅಂಜಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಆರು ತಿಂಗಳಲ್ಲಿ ನಾಲ್ಕು ಕಟ್ಟಡಗಳು ಕುಸಿದು ಹಲವರ ಪ್ರಾಣಕ್ಕೆ ಎರವಾಗಿದೆ. ಬಡವರ ಪರ ಮಾತಿನಲ್ಲಿ ಕಳಕಳಿ ವ್ಯಕ್ತಪಡಿಸುವ ಕಾಂಗ್ರೆಸ್ ಆಡಳಿತದಲ್ಲಿ ಬಡವರ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ. ಹೀಗಾಗಿ ಮತ್ತೆ ಮತ್ತೆ ಇಂತಹ ಪ್ರಕರಣಗಳು ನಡೆಯುತ್ತಿವೆ' ಎಂದು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.