ಬೆಂಗಳೂರು: ಅನಧಿಕೃತವಾಗಿ ಗೈರು ಹಾಜರಿಯಾಗಿದ್ದ ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ 15 ಜನ ವೈದ್ಯರಿಗೆ ಕಾರಣ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಆಸ್ಪತ್ರೆಗೆ ಸಚಿವರು ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಸುಮಾರು 25 ವೈದ್ಯರು ಗೈರುಹಾಜರಾಗಿದ್ದರು.
ಇವರಲ್ಲಿ 10 ಜನರು ಮಾತ್ರ ರಜಾ ಅರ್ಜಿ ನೀಡಿರುವುದು ಗಮನಕ್ಕೆ ಬಂದಿದ್ದು, ಇನ್ನುಳಿದ ಅನಧಿಕೃತವಾಗಿ ಗೈರುಹಾಜರಾದ ವೈದ್ಯರಿಗೆ ನೋಟಿಸ್ ನೀಡಲು ಅವರು ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿಗಳನ್ನು ವಿತರಿಸುವಂತೆ ಮತ್ತು ಆಸ್ಪತ್ರೆಗೆ ಬರುವವರ ಸೂಕ್ತ ತಪಾಸಣೆ ನಡೆಸುವಂತೆ ಸಿಬ್ಬಂದಿಗೆ ಆದೇಶಿಸಿದ್ದಾರೆ. ಇದಲ್ಲದೇ, ರೋಗಿಗಳಿಗೆ ಅರ್ಥವಾಗುವಂತೆ ವಿವರಣೆಗಳನ್ನು (ಕೇಸ್ಶೀಟ್) ಕನ್ನಡ ಭಾಷೆಯಲ್ಲಿಯೂ ನೀಡಬೇಕೆಂದು ವೈದ್ಯರಿಗೆ ಅವರು ತಿಳಿಸಿದ್ದಾರೆ ಎಂದು ಇಲಾಖೆಯ ಪ್ರಕಟಣೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.