ADVERTISEMENT

ಅನುಮಾನಾಸ್ಪದ ರೀತಿಯಲ್ಲಿ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:23 IST
Last Updated 12 ಏಪ್ರಿಲ್ 2018, 19:23 IST
ಘಟನಾ ಸ್ಥಳದಲ್ಲಿ ಸೇರಿದ್ದ ಕಾರ್ಮಿಕರು
ಘಟನಾ ಸ್ಥಳದಲ್ಲಿ ಸೇರಿದ್ದ ಕಾರ್ಮಿಕರು   

ಬೆಂಗಳೂರು: ಬನ್ನೇರುಘಟ್ಟ ಮುಖ್ಯರಸ್ತೆಯ 'ವೇಗಾ ಸಿಟಿ’ ಮಾಲ್‌ನಲ್ಲಿ ಕಾರ್ಮಿಕ ಮಂಜುನಾಥ್ (30) ಗುರುವಾರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಚಿತ್ರದುರ್ಗದ ಅವರು, ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಮೃತರ ಸಂಬಂಧಿ ಚಿಕ್ಕೇಗೌಡ, ಮಾಲ್‌ನಲ್ಲಿ ಮೇಲ್ವಿಚಾರಕರಾಗಿದ್ದಾರೆ. ಅವರ ಮೂಲಕ ಗುರುವಾರ ಬೆಳಿಗ್ಗೆಯಷ್ಟೇ ಮಂಜುನಾಥ್‌ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲಸ ಆರಂಭಿಸಿ ಗಂಟೆಯಾಗಿತ್ತು. ಸ್ಥಳದಲ್ಲೇ ಕುಸಿದು ಬಿದ್ದಿದ್ದರು ಎಂದು ಮೈಕೊ ಲೇಔಟ್ ಪೊಲೀಸರು ತಿಳಿಸಿದರು.

ಸಹ ಕಾರ್ಮಿಕರು, ಆಂಬುಲೆನ್ಸ್‌ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದಿದ್ದ ಆಂಬುಲೆನ್ಸ್‌ ಸಿಬ್ಬಂದಿ, ಮಂಜುನಾಥ್‌ ಮೃತಪಟ್ಟಿರುವುದಾಗಿ ಹೇಳಿದ್ದರು. ಸ್ಥಳದಲ್ಲಿದ್ದ ಕೆಲ ಕಾರ್ಮಿಕರು, ‘ಅಸ್ವಸ್ಥಗೊಂಡ ಕಾರ್ಮಿಕನಿಗೆ ವೇಗಾ ಸಿಟಿ ಅಧಿಕಾರಿಗಳು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲಿಲ್ಲ. ಅವರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ’ ಎಂದು ಆರೋಪಿಸಿ  ಪ್ರತಿಭಟನೆ ನಡೆಸಿದರು.

ADVERTISEMENT

ಮೃತರ ಸಂಬಂಧಿಕರು ನೀಡಿರುವ ದೂರಿನನ್ವಯ, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಹೃದಯಾಘಾತದಿಂದ ಈ ಸಾವು ಸಂಭವಿಸಿರುವ ಅನುಮಾನವಿದೆ. ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ವಿವರಿಸಿದರು.  ಸಾವಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ವೇಗಾ ಸಿಟಿ’ ಮಾಲ್‌ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.