ಹೊಸಕೋಟೆ: ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಿಗನೂರು ಗ್ರಾಮದ ಕೆರೆ ಬಳಿಯ ಹಳ್ಳವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಅಸ್ಥಿಪಂಜರವೊಂದು ಸೋಮವಾರ ಪತ್ತೆಯಾಗಿದೆ.
ಅಸ್ಥಿಪಂಜರದ ಮೇಲೆ ದೊಡ್ಡ ಸೈಜು ಕಲ್ಲನ್ನು ಇಡಲಾಗಿತ್ತು. ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟಿದ್ದರಿಂದ ಅದು ಪುರುಷನ ಅಸ್ಥಿಪಂಜರ ಇರಬಹುದು ಎಂದು ಶಂಕಿಸಲಾಗಿದೆ. ಈ ವ್ಯಕ್ತಿಯನ್ನು ದುಷ್ಕರ್ಮಿಗಳು ಸುಮಾರು ಮೂರು ತಿಂಗಳ ಕೆಳಗೆ ಬೇರೆಲ್ಲೋ ಕೊಲೆ ಮಾಡಿ ನಂತರ ಇಲ್ಲಿ ತಂದು ಬಿಸಾಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಅಸ್ಥಿಪಂಜರ ಸಿಕ್ಕ ಜಾಗದಲ್ಲಿ ನೀರು ನಿಂತು ಜೊಂಡು ಬೆಳೆದಿರುವುದರಿಂದ ಅದು ಯಾರಿಗೂ ಕಾಣುತ್ತಿರಲಿಲ್ಲ. ದನ ಕಾಯುವ ಹುಡುಗರು ಅಸ್ಥಿಪಂಜರದ ಬಗ್ಗೆ ಪೊಲೀಸರಿಗೆ ಸೋಮವಾರ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ನಂತರ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಅಸ್ಥಿಪಂಜರದ ಲಿಂಗ ಹಾಗೂ ವಯಸ್ಸು ತಿಳಿಯಲು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೈಕ್ ಡಿಕ್ಕಿ: ಮಹಿಳೆ ಸಾವು: ತಾಲ್ಲೂಕಿನ ಸೂಲಿಬೆಲೆ ಕೆರೆ ಏರಿ ಬಳಿ ಬೈಕ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಸೂಲಿಬೆಲೆಯ ಕೃಷ್ಣಪ್ಪ ಅವರ ಪತ್ನಿ ಮುನಿಯಮ್ಮ (55) ಮೃತಪಟ್ಟ ಮಹಿಳೆ. ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.