ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಅಬ್ಬಿಗೆರೆ ಗ್ರಾಮದ ಜನತಾ ಕಾಲೋನಿಯಲ್ಲಿ ಕುಡಿಯಲು ನೀರಿಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದೆ.
‘ಕಾಲೋನಿಯಲ್ಲಿ ಕುಡಿಯಲು ನೀರು ಇಲ್ಲ. ಬೆಂಗಳೂರು ಜಲ ಮಂಡಳಿಯವರು ವಾರದಲ್ಲಿ ಎರಡು ದಿನ ಟ್ಯಾಂಕರ್ ನೀರು ಪೂರೈಸುತ್ತಾರೆ. ಚುನಾವಣೆ ನೀತಿಸಂಹಿತೆ ಜಾರಿಯಾದಾಗಿನಿಂದ ಟ್ಯಾಂಕರ್ಗಳು ಇತ್ತ ಬಂದಿಲ್ಲ. ಕಳೆದ ಐದಾರು ವರ್ಷಗಳಿಂದಲೂ ಕುಡಿಯುವ ನೀರಿನ ಬವಣೆ ಇಲ್ಲಿದೆ’ ಎಂದು ಕಾಲೋನಿಯ ಸರೋಜಮ್ಮ ಹೇಳಿದರು.
‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಕಳೆದ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಜನತಾ ಕಾಲೋನಿಗೆ ಪ್ರಾಥಮಿಕ ಸೌಲಭ್ಯವನ್ನು ಒದಗಿಸುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿಯ ತನಕ ಬೀದಿ ದೀಪವನ್ನು ಕೊಟ್ಟಿದ್ದು ಬಿಟ್ಟರೆ ಯಾವ ಸಮಸ್ಯೆಯನ್ನೂ ಬಗೆಹರಿಸಿಲ್ಲ. ನಾವು ಬೆಂಗಳೂರಿನಲ್ಲಿ ಇದ್ದೇವೊ ಅಥವಾ ಯಾವುದಾದರೂ ಕುಗ್ರಾಮದಲ್ಲಿ ಇದ್ದೇವೊ ಎನ್ನುವ ಅನುಮಾನ ಬರುತ್ತದೆ’ ಎಂದು ಗ್ರಾಮದ ನಿವಾಸಿ ಹನುಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡ್ ಸದಸ್ಯ ನಾಗಭೂಷಣ್, ‘ಈ ವರ್ಷ ಕೊರೆಸಿದ ಕೊಳವೆಬಾವಿ ಮುಂದಿನ ವರ್ಷಕ್ಕೆ ಬತ್ತಿ ಹೋಗುತ್ತದೆ. ಶೆಟ್ಟಿಹಳ್ಳಿ ಕೆರೆಯಲ್ಲಿ ನೀರು ಇದ್ದರೆ ಮಾತ್ರ ಅಂತರ್ಜಲ ಇರುತ್ತದೆ. ಶುದ್ಧ ನೀರಿನ ಘಟಕ ಸ್ಥಾಪಿಸಿಲು ನೀರಿನ ಕೊರತೆ ಇದೆ. ಮೊತ್ತೊಂದು ಕೊಳವೆಬಾವಿ ಕೊರೆಸಲಾಗುತ್ತಿದ್ದು, ಶೀಘ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.
ಮಹಾನಗರ ಪಾಲಿಕೆ ಬಾಗಿಲುಗುಂಟೆ ವ್ಯಾಪ್ತಿಯ ಜಂಟಿ ನಿರ್ದೇಶಕ ವೆಂಕಟಾಚಲಪತಿ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.