ADVERTISEMENT

ಅರ್ಕಾವತಿ ಬಡಾವಣೆ: ರಸ್ತೆ ನಿರ್ಮಾಣಕ್ಕೆ ಮತ್ತೆ ಭೂಸ್ವಾಧೀನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 20:20 IST
Last Updated 9 ಜೂನ್ 2017, 20:20 IST
ಅರ್ಕಾವತಿ ಬಡಾವಣೆ: ರಸ್ತೆ ನಿರ್ಮಾಣಕ್ಕೆ ಮತ್ತೆ ಭೂಸ್ವಾಧೀನ
ಅರ್ಕಾವತಿ ಬಡಾವಣೆ: ರಸ್ತೆ ನಿರ್ಮಾಣಕ್ಕೆ ಮತ್ತೆ ಭೂಸ್ವಾಧೀನ   

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆಯಾಗಿರುವ ಕೆಲವು ನಿವೇ ಶನಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಮತ್ತೆ ಭೂಸ್ವಾಧೀನ ನಡೆಸಲು ಬೆಂಗ ಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಶುಕ್ರವಾರ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

‘ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡ ಕೆಲವು ಜಾಗವನ್ನು ಡಿನೋಟಿಫಿಕೇಷನ್‌ ಹಾಗೂ ರಿಡೂ ಪ್ರಕ್ರಿಯೆಯಿಂದಾಗಿ ಕಳೆದು ಕೊಂಡಿದ್ದೇವೆ. ಹಂಚಿಕೆಯಾಗಿರುವ ಕೆಲವು ನಿವೇಶನಗಳಿಗೆ ರಸ್ತೆ ಮಾಡುವುದಕ್ಕೂ ಜಾಗ ಇಲ್ಲದ ಸ್ಥಿತಿ ಇದರಿಂದಾಗಿ ನಿರ್ಮಾಣವಾಗಿತ್ತು. ರಸ್ತೆ ನಿರ್ಮಿಸಲು ಹೊಸತಾಗಿ ಭೂಸ್ವಾಧೀನ ನಡೆಸಲು ಇಂದಿನ ಸಭೆಯಲ್ಲಿ ತೀರ್ಮಾ ನಿಸಲಾಯಿತು’ ಎಂದು ಬಿಡಿಎ ಅಧ್ಯಕ್ಷ ಕೆ.ವೆಂಕಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ರಸ್ತೆಗಳಿಗಾಗಿ ಜಾಗ ಬಿಟ್ಟು ಕೊಡುವವರಿಗೆ 60:40 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಜಾಗವನ್ನು ನೀಡುತ್ತೇವೆ. ಅದಕ್ಕೆ ಒಪ್ಪದಿದ್ದರೆ, ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ನಗದು ಪರಿಹಾರ ನೀಡುತ್ತೇವೆ’ ಎಂದು ಅವರು ತಿಳಿಸಿದರು.

ADVERTISEMENT

‘ಬೆಳ್ಳಂದೂರು ಕೆರೆ ಅಭಿವೃದ್ಧಿ ಕಾರ್ಯವನ್ನು ಇನ್ನಷ್ಟು ಚುರುಕು ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿ ಸಿದ್ದೇವೆ. ಸದ್ಯ ಕೆರೆಯ ಕಳೆ ತೆರವು ಗೊಳಿಸುವ ಹಾಗೂ ಬೇಲಿ ಹಾಕುವ ಕಾರ್ಯವನ್ನು ಬಿಡಿಎ ವತಿಯಿಂದ ಮಾಡುತ್ತೇವೆ. ಹೆಚ್ಚಿನ ಅಭಿವೃದ್ಧಿಗೆ  ಅನುದಾನ ನೀಡುವಂತೆ ಮುಖ್ಯ ಮಂತ್ರಿ ಅವರನ್ನು ಕೋರುತ್ತೇವೆ’ ಎಂದರು.

ಮೂಲಸೌಕರ್ಯಕ್ಕೆ ₹1,360 ಕೋಟಿ: ‘ಕೆಂಪೇಗೌಡ ಬಡಾವಣೆಯಲ್ಲಿ ಹೆಚ್ಚಿನ ಕಡೆ ರಸ್ತೆ ಹಾಗೂ ಮಳೆ ನೀರು ಹರಿದು ಹೋಗುವ ಚರಂಡಿಗಳನ್ನು ನಿರ್ಮಿಸ ಲಾಗಿದೆ. ಆದರೆ, ವಿದ್ಯುತ್‌, ಕಾವೇರಿ ನೀರು ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಬೇಕಾಗಿದೆ. ಇದಕ್ಕೆ ಟೆಂಡರ್‌ ಕರೆ ಯಲು ಅನುಮತಿ ನೀಡಿದ್ದೇವೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ₹ 1,360 ಕೋಟಿ ಮೀಸಲಿಡಲಾಗಿದೆ’ ಎಂದರು.

ರೈತರಿಗೆ 50:50 ಅನುಪಾತದಲ್ಲಿ ಪರಿಹಾರ
‘ಈ ಹಿಂದೆ ಕೆಲವು ಬಡಾವಣೆಗಳಲ್ಲಿ ರಸ್ತೆ ಮತ್ತು ಇತರ ಮೂಲಸೌಕರ್ಯ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಸದೆಯೇ ಬಿಡಿಎ ರೈತರ  ಭೂಮಿಯನ್ನು ಬಳಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಕೆಲವು ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಇಂತಹ ಪ್ರಕರಣಗಳಲ್ಲಿ ಜಮೀನು ಕಳೆದುಕೊಂಡವರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ ನೀಡಲು ಸಭೆಯಲ್ಲಿ ನಿರ್ಧರಿ ಸಲಾಗಿದೆ’ ಎಂದು ವೆಂಕಟೇಶ್‌ ತಿಳಿಸಿದರು.

ಮೈಸೂರು ರಸ್ತೆಯಿಂದ (ರಾಜರಾಜೇಶ್ವರಿ ಆಸ್ಪತ್ರೆ ಬಳಿಯಿಂದ)  ಮಾಗಡಿ ರಸ್ತೆಗೆ (ಸೀಗೆಹಳ್ಳಿವರೆಗೆ)  ಸಂಪರ್ಕ ಕಲ್ಪಿಸಲು 100 ಮೀಟರ್‌ ಅಗಲದ ರಸ್ತೆಯನ್ನು ಬಿಡಿಎ ನಿರ್ಮಿಸಲಿದೆ.

ಈ ರಸ್ತೆ ಕೆಂಪೇಗೌಡ ಬಡಾವಣೆ ಮೂಲಕ ಹಾದು ಹೋಗಲಿದೆ. ಇದಕ್ಕೆ ಜಾಗ ಬಿಟ್ಟುಕೊಡುವವರಿಗೂ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಜಾಗ ನೀಡುವ ಪ್ರಸ್ತಾವಕ್ಕೂ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.