ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗಾಗಿ ನಡೆಯುತ್ತಿರುವ ಪ್ರಾಥಮಿಕ ಚುನಾವಣೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಅಧಿಕಾರಿ ಆರತಿ ಕೃಷ್ಣ ಅವರು ಸಲ್ಲಿಸಿರುವ ನಾಮಪತ್ರವನ್ನು ಎಐಸಿಸಿ ಮಾನ್ಯಮಾಡುವ ಸಾಧ್ಯತೆ ಇದೆ.
ಆರತಿ ಅವರು ‘ಸಾರ್ವಜನಿಕ ಸೇವೆ’ ವಿಭಾಗದಡಿ ಸ್ಪರ್ಧೆಗೆ ಅವಕಾಶ ಕೋರಿದ್ದಾರೆ. ಅವರು ಈ ವಿಭಾಗದಡಿ ಸ್ಪರ್ಧೆಗೆ ಅರ್ಹರೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಚುನಾವಣಾಧಿಕಾರಿಗಳು, ನಾಮಪತ್ರವನ್ನು ದೆಹಲಿಗೆ ರವಾನಿಸಿದ್ದಾರೆ. ಎಐಸಿಸಿ ಪ್ರಾಥಮಿಕ ಚುನಾವಣಾ ಉಸ್ತುವಾರಿ ವಿಭಾಗವು ಪರಿಶೀಲನೆ ನಡೆಸಿದ್ದು, ಸ್ಪರ್ಧೆಗೆ ಸಮ್ಮತಿ ಸೂಚಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಭಾನುವಾರ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲೇ ಆರತಿ ಅವರ ನಾಮಪತ್ರವನ್ನು ಅಂಗೀಕರಿಸುವ ವಿಷಯವನ್ನು ಚುನಾವಣಾಧಿಕಾರಿಗಳಾದ ಜಸ್ಪ್ರೀತ್ ಸಿಂಗ್ ಮತ್ತು ನಿತಿನ್ ಕುಂಭಾಲ್ಕರ್ ಪ್ರಕಟಿಸಲಿದ್ದಾರೆ ಎಂದು ಗೊತ್ತಾಗಿದೆ.
ಒಟ್ಟು ಸಲ್ಲಿಕೆಯಾಗಿದ್ದ ಎಂಟು ನಾಮಪತ್ರಗಳಲ್ಲಿ ಮೂರನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಎಐಸಿಸಿ ವಕ್ತಾರ ಎಂ.ವಿ.ರಾಜೀವ್ ಗೌಡ ಮತ್ತು ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್ ಅವರ ನಾಮಪತ್ರವನ್ನು ಅಂಗೀಕರಿಸಲಾಗಿತ್ತು. ಆರತಿ ಕೃಷ್ಣ ಅವರ ಸ್ಪರ್ಧೆಗೆ ಸಮ್ಮತಿ ದೊರೆತರೆ ಪ್ರಾಥಮಿಕ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳ ಸಂಖ್ಯೆ ಐದಕ್ಕೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.