ADVERTISEMENT

ಆರ್ಸೆಲರ್ ಮಿತ್ತಲ್ ಕಂಪೆನಿಯಿಂದ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:30 IST
Last Updated 6 ಮಾರ್ಚ್ 2012, 19:30 IST

ಬೆಂಗಳೂರು: ಬಳ್ಳಾರಿಯ ದೋಣಿಮಲೆ ಅರಣ್ಯ ಪ್ರದೇಶದಲ್ಲಿ ಅದಿರು ಗಣಿಗಾರಿಕೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಆರ್ಸೆಲರ್-ಮಿತ್ತಲ್ ಉಕ್ಕು ಕಂಪೆನಿ ಹಿಂದಕ್ಕೆ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಎರಡನೆಯ ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನಕ್ಕೆ ಸಿದ್ಧತೆ ನಡೆಸಿರುವ ಸಂದರ್ಭದಲ್ಲೇ ಈ ವಿದ್ಯಮಾನ ನಡೆದಿದೆ.

`ದೋಣಿಮಲೆ ಅರಣ್ಯ ಪ್ರದೇಶದಲ್ಲಿ ಅದಿರಿನ ನಿಕ್ಷೇಪ ದೊಡ್ಡ ಪ್ರಮಾಣದಲ್ಲಿ ಇಲ್ಲ. ಇರುವ ಅದಿರಿನ ಗುಣಮಟ್ಟವೂ ಉತ್ತಮವಾಗಿಲ್ಲ. ಹಾಗಾಗಿ ಅಲ್ಲಿ ಗಣಿಗಾರಿಕೆ ನಡೆಸುವುದು ಆರ್ಥಿಕವಾಗಿ ಲಾಭದಾಯಕ ಅಲ್ಲ~ ಎಂದು ಕಂಪೆನಿ ಕಳೆದ ಜೂನ್ ತಿಂಗಳಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಬರೆದ ಪತ್ರದಲ್ಲಿ ವಿವರಿಸಿದೆ.

ಅಲ್ಲಿ ದೊರೆಯುವ ಅದಿರಿನಲ್ಲಿ ಕಬ್ಬಿಣದ ಅಂಶ ಇರುವುದು ಶೇಕಡ 30ರಿಂದ 38ರಷ್ಟು ಮಾತ್ರ. ಈ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದು ಕಂಪೆನಿ ಹೇಳಿದೆ.

ಇದೇ ಕಂಪೆನಿ ಬಳ್ಳಾರಿಯ ಕುಡುತಿನಿಯಲ್ಲಿ 30 ಸಾವಿರ ಕೋಟಿ ರೂಪಾಯಿ ಹೂಡಿಕೆಯ ಉಕ್ಕು ತಯಾರಿಕಾ ಘಟಕ ಆರಂಭಿಸಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.