ಬೆಂಗಳೂರು: ‘ಆಹಾರ ಸರಪಳಿಯನ್ನು ಕಾಪಾಡುವಲ್ಲಿ ಚಿಟ್ಟೆಗಳು ಎಲೆಮರೆಕಾಯಿಯಂತೆ ಕೆಲಸ ಮಾಡುತ್ತವೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಪಿ.ಅನೂರ್ ರೆಡ್ಡಿ ಹೇಳಿದರು.
ಅರಣ್ಯ ಇಲಾಖೆ ಹಾಗೂ ಬೆಂಗಳೂರು ಬಟರ್ ಫ್ಲೈ ಕ್ಲಬ್ ಆಶ್ರಯದಲ್ಲಿ ನಗರದ ದೊರೆಸಾನಿಪಾಳ್ಯದ ಅರಣ್ಯ ಆವರಣದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ‘ಚಿಟ್ಟೆಗಳ ಉತ್ಸವ’ದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ 1,200 ಪ್ರಭೇದದ ಚಿಟ್ಟೆಗಳಿವೆ. ಇವು ಕಡಿಮೆ ಜೀವಿತಾವಧಿ ಹೊಂದಿದ್ದರೂ, ಉಪಕಾರಿಯಾಗಿವೆ. ಅವುಗಳ ಕೊಡುಗೆಯನ್ನು ನಾವು ಗುರುತಿಸುತ್ತಿಲ್ಲ’ ಎಂದರು.
ಅರಣ್ಯ ಪಡೆಯ ಮುಖ್ಯಸ್ಥ ಕೆ.ಎಸ್.ಸುಗಾರ ಮಾತನಾಡಿ, ‘ಅರಣ್ಯ ನಾಶದಿಂದ ಚಿಟ್ಟೆಗಳ ಸಂತತಿ ಕಣ್ಮರೆಯಾಗುತ್ತಿದೆ. ಚಿಟ್ಟೆಗಳ ಉಳಿವಿಗಾಗಿ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದರು.
ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಚಿಟ್ಟೆಗಳ ಸಂತತಿ, ಅವುಗಳ ಕೊಡುಗೆ, ಜೀವನ ವಿಧಾನದ ಕುರಿತು ಮಾಹಿತಿ ನೀಡಲಾಯಿತು.
ಚಿಟ್ಟೆಗಳನ್ನು ಆಕರ್ಷಿಸುವ ವಿವಿಧ ಸಸ್ಯಗಳ ಬೀಜದ ಉಂಡೆಗಳನ್ನು ತಯಾರಿಸಿ, ಖಾಲಿ ಜಾಗಗಳಲ್ಲಿ ಎಸೆಯಲಾಗುತ್ತದೆ. ವಿದ್ಯಾರ್ಥಿಗಳಿಗಾಗಿ ಚಿಟ್ಟೆಗಳ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ವಂತ ಜಮೀನಿನಲ್ಲಿ ಕೃತಕ ಕಾಡನ್ನು ನಿರ್ಮಿಸಿ ಚಿಟ್ಟೆಗಳ ಸಂರಕ್ಷಿಸುತ್ತಿರುವ ದಕ್ಷಿಣ ಕನ್ನಡದ ಸಮ್ಮಿಲನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.