ಬೆಂಗಳೂರು: ‘ಜಾಗತಿಕ ಮಟ್ಟದಲ್ಲಿ ಮೊಬೈಲ್ ಆ್ಯಪ್ ತಂತ್ರಜ್ಞಾನ ಸಿದ್ಧಪಡಿಸುವಲ್ಲಿ ನಮ್ಮ ರಾಜ್ಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ’ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ನಗರದಲ್ಲಿ ಗುರುವಾರ ಜಿಮಾಸ( ಗ್ಲೋಬಲ್ ಮೊಬೈಲ್ ಆ್ಯಪ್ ಸಮ್ಮಿಟ್ ಅಂಡ್ ಅವಾರ್ಡ್) ಆಯೋಜಿಸಿದ್ದ ಜಾಗತಿಕ ಮೊಬೈಲ್ ಆ್ಯಪ್ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುತ್ ಬಿಲ್ ಪಾವತಿಯಿಂದ ಹಿಡಿದು ಹಲವು ಸೇವೆಗಳಿಗೆ ಆ್ಯಪ್ ಬಳಕೆಯಾಗುತ್ತಿದೆ. ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು, ಅಪರಾಧ ದಾಖಲೆ ನಿರ್ವಹಿಸಲು ಪೊಲೀಸ್ ಇಲಾಖೆ ಆ್ಯಪ್ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸುತ್ತಿದೆ. ರಾಜ್ಯ ಸರ್ಕಾರ ನಾಗರಿಕರಿಗೆ ಹಲವು ಸೇವೆಗಳನ್ನು ಆ್ಯುಪ್ ಮೂಲಕ ಒದಗಿಸುತ್ತಿದೆ.
ಇಂದು ಇಡೀ ಜಗತ್ತನ್ನು ಆ್ಯಪ್ ತಂತ್ರಜ್ಞಾನ ಆವರಿಸಿಕೊಳ್ಳುತ್ತಿದೆ. ಜಾಗತಿಕಮಟ್ಟದಲ್ಲಿ ಆ್ಯಪ್ ತಂತ್ರಜ್ಞಾನದ ವಹಿವಾಟಿನಲ್ಲಿ ದೇಶ ಅಗ್ರಸ್ಥಾನದಲ್ಲಿದೆ ಎಂದರು. ಆ್ಯಪ್ ತಂತ್ರಜ್ಞಾನ ದಿನದಿಂದ ದಿನಕ್ಕೆ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸ್ಟಾರ್ಟ್ ಅಪ್ಗಳಿಗೂ ಅನುಕೂಲಕರ ವಾತಾವರಣ ಕಲ್ಪಿಸುತ್ತಿದೆ. ಜೈವಿಕ ವ್ಯವಸ್ಥೆ, ಪರಿಸರ ಹಾಗೂ ಕೃಷಿ ಕ್ಷೇತ್ರಕ್ಕೆ ಪೂರಕ ಆ್ಯಪ್ ಸಿದ್ಧಪಡಿಸಲು ತಜ್ಞರು ಒತ್ತು ಕೊಡಬೇಕೆಂದರು.
‘ಜಿಮಾಸ’ ಅಧ್ಯಕ್ಷ ಸಿ.ಆರ್.ವೆಂಕಟೇಶ್ ಮಾತನಾಡಿ, ‘ಆ್ಯಪ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬೆಂಗಳೂರು ಕೇಂದ್ರಬಿಂದುವಾಗಿರುವುದರಿಂದ ಇಲ್ಲಿಯೇ ಜಾಗತಿಕ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. 16 ದೇಶಗಳ ನೂರಕ್ಕೂ ಹೆಚ್ಚು ತಜ್ಞರು ಆ್ಯಪ್ ತಂತ್ರಜ್ಞಾನದ ಬಗ್ಗೆ ವಿಚಾರ ವಿನಿಮಯ ನಡೆಸಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.