ಬೆಂಗಳೂರು: ಬ್ರಿಗೇಡ್ ರಸ್ತೆಯ ಒಪೆರಾ ಜಂಕ್ಷನ್ ಬಳಿ ಹಾಕಲಾಗಿದ್ದ ಬ್ಯಾನರ್ನಲ್ಲಿ ಇಂಗ್ಲಿಷ್ ಅಕ್ಷರಗಳಿದ್ದವು ಎಂಬ ಕಾರಣಕ್ಕೆ ‘ಕಸ್ತೂರಿ ಕರ್ನಾಟಕ ಜನಪರ ವೇದಿಕೆ’ ಕಾರ್ಯಕರ್ತರು ಬುಧವಾರ ಆ ಬ್ಯಾನರ್ ಹರಿದುಹಾಕಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ವೇದಿಕೆಯ ಅಧ್ಯಕ್ಷ ನೀಲೇಶಗೌಡ ಅವರ ನೇತೃತ್ವದಲ್ಲಿ ನಗರದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದ ಕಾರ್ಯಕರ್ತರು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಒಪೆರಾ ಜಂಕ್ಷನ್ಗೆ ಬಂದರು. ಶಾಸಕ ಎನ್.ಎ.ಹ್ಯಾರಿಸ್ ಅವರ ಭಾವಚಿತ್ರವಿದ್ದ ಬ್ಯಾನರೊಂದರಲ್ಲಿ ಇಂಗ್ಲಿಷ್ ಅಕ್ಷರಗಳಿರುವುದನ್ನು ಗಮನಿಸಿದ ಅವರು, ಅದನ್ನು ಹರಿದು ಹಾಕಿ ಘೋಷಣೆಗಳನ್ನು ಕೂಗಿದರು.
ಸ್ಥಳಕ್ಕೆ ಬಂದ ಅಶೋಕನಗರ ಪೊಲೀಸರು, ಗುಂಪು ಚದುರಿಸಿ 48 ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಬಳಿಕ ನಗರ ಸಶಸ್ತ್ರ ಮೀಸಲು ಪಡೆಯ ಮೈದಾನಕ್ಕೆ ಕರೆದೊಯ್ದು ಸಂಜೆ ಬಿಡುಗಡೆ ಮಾಡಿದರು.
‘ಇಂಗ್ಲಿಷ್ ಅಕ್ಷರಗಳಿಂದ ಕೂಡಿದ ಅಂಗಡಿಗಳ ಫಲಕಗಳಿಗೆ ಮಸಿ ಬಳಿಯಲು ಕಾರ್ಯಕರ್ತರು ಬ್ರಿಗೇಡ್ ರಸ್ತೆಗೆ ಬರುತ್ತಾರೆ ಎಂಬ ಮಾಹಿತಿ ಇತ್ತು. ಒಂದು ಬ್ಯಾನರ್ ಹರಿದು ಹಾಕುತ್ತಿದ್ದಂತೆಯೇ ಅವರನ್ನು ವಶಕ್ಕೆ ಪಡೆದುಕೊಂಡೆವು’ ಎಂದು ಅಶೋಕನಗರ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.