ಬೆಂಗಳೂರು: ಎಂಟನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ (ಜ.28) ಸಂಜೆ ವಿಧಾನಸೌಧದ ಮುಂಭಾಗ ಚಾಲನೆ ಸಿಗಲಿದೆ.
ಚಿತ್ರರಂಗದ ಯುವ ತಂತ್ರಜ್ಞರು, ಸೃಜನಶೀಲ ಸಿನಿಮಾ ನಿರ್ಮಾಪಕರು, ವಿದ್ಯಾರ್ಥಿಗಳು, ಸದಭಿರುಚಿಯ ಸಿನಿಮಾಸಕ್ತರು ಉತ್ಸವದ ಭಾಗವಾಗಲು ಕಾಯುತ್ತಿದ್ದಾರೆ.
ಬಾಲಿವುಡ್ ನಟಿ ಜಯಾ ಬಚ್ಚನ್ ಉತ್ಸವಕ್ಕೆ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಬಾಲಿವುಡ್ನ ಹಿರಿಯ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ, ಹಾಲಿವುಡ್ ನಿರ್ಮಾಪಕ ವಿಜಯ್ ಅಮೃತರಾಜ್, ತೆಲುಗು ನಟ ಡಿ. ವೆಂಕಟೇಶ್, ನಟರಾದ ಶಿವರಾಜ್ ಕುಮಾರ್, ಸುದೀಪ್ ಉದ್ಘಾಟನೆಗೆ ಸಾಕ್ಷಿಯಾಗುವರು.
ಕೇವಲ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಚಿತ್ರಗಳ ಪ್ರದರ್ಶನಕ್ಕಿಂತ ವಿವಿಧ ದೇಶಗಳ ಮತ್ತು ಭಾರತೀಯ ವಿಶಿಷ್ಟ ಚಿತ್ರಗಳನ್ನು ಪ್ರದರ್ಶಿಸುವುದು ಸಿನಿಮೋತ್ಸವದ ವಿಶೇಷ. ಕಥನ ನಿರ್ವಹಣೆಯ ದೃಷ್ಟಿಯಲ್ಲಿ ಹೊಸ ಜಗತ್ತು ಮತ್ತು ಹೊಸ ತಾಂತ್ರಿಕ ಸಾಧ್ಯತೆಯನ್ನು ತೋರಿಸುವ ಪ್ರಯೋಗಶೀಲ ಸಿನಿಮಾಗಳು ಪ್ರದರ್ಶನವಾಗುತ್ತಿದ್ದು, ಸ್ಥಳೀಯ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗುವಂತಿದೆ.
ಫೆ. 4ರವರೆಗೆ ನಡೆಯುವ ಉತ್ಸವದಲ್ಲಿ 45 ದೇಶಗಳ 200 ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಒಟ್ಟು 15 ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ಆಯೋಜಿಸಲಾಗಿದೆ. ರಸೂಲ್ ಫೂಕುಟ್ಟಿ, ಅನಿಲ್ ಮೆಹ್ತಾ, ಸುಹಾಸಿನಿ ಮಣಿರತ್ನಂ ಮತ್ತಿತರರು ಪಾಲ್ಗೊಂಡು ಅನುಭವ ಹಂಚಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಕನ್ನಡದ ‘ತಿಥಿ’ ಸಿನಿಮಾ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳುತ್ತಿದೆ.
ಒಟ್ಟು ನಾಲ್ಕು ಸಾವಿರ ಪ್ರತಿನಿಧಿಗಳು ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಿಂದೆಲ್ಲ ಲಿಡೊ ಮಾಲ್, ಫನ್ ಸಿನಿಮಾಸ್, ವಾರ್ತಾ ಭವನ ಮತ್ತು ಚಲನಚಿತ್ರ ಅಕಾಡೆಮಿಯ ‘ಬಾದಾಮಿ ಹೌಸ್’ನಲ್ಲಿ ಪ್ರದರ್ಶನಗಳು ಇರುತ್ತಿದ್ದವು.
ಆದರೆ ಈ ಬಾರಿ ರಾಜಾಜಿನಗರದ ಒರಾಯನ್ ಮಾಲ್ನ 11 ಪರದೆಗಳಲ್ಲಿ ಪ್ರದರ್ಶನವಿರುವುದು ವಿಶೇಷ. ಒರಾಯನ್ ಮಾಲ್ನಲ್ಲಿ ಸಿನಿಮೋತ್ಸವ ಸಂಘಟಿಸಿದ್ದರಿಂದ ವಾಹನ ನಿಲುಗಡೆ ಶುಲ್ಕ ಕುರಿತು ಅಸಮಾಧಾನದ ದನಿ ಕೇಳಿಬಂದಿತ್ತು. ಆದರೆ ಅದಕ್ಕೆ ಈಗ ಪರಿಹಾರ ಕಲ್ಪಿಸಲಾಗಿದ್ದು, ದಿನವಿಡೀ ಕಾರುಗಳ ಪಾರ್ಕಿಂಗ್ಗೆ ₹ 60, ದ್ವಿಚಕ್ರವಾಹನಗಳ ನಿಲುಗಡೆಗೆ ₹30 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ.
ಬಯಲು ಸಿನಿಮೋತ್ಸವ
ಶಬ್ದಗ್ರಹಣ, ನಿರ್ದೇಶನ, ಸಂಭಾಷಣೆ ಇತ್ಯಾದಿ ವಿಷಯಗಳ ಬಗ್ಗೆ ವಿಚಾರ ಸಂಕಿರಣ ಸಂಘಟಿಸಲಾಗಿದೆ. ಕಳೆದ ಬಾರಿ ಸ್ವಾತಂತ್ರ್ಯ ಉದ್ಯಾನದಲ್ಲಿ ಬಯಲು ಸಿನಿಮೋತ್ಸವ ನಡೆಸಲಾಗಿತ್ತು. ಆದರೆ, ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ ಕಾರಣ ಈ ಸಲ ಅದನ್ನು ಕೈಬಿಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.