ಬೆಂಗಳೂರು: ವಿಶ್ವ ಸೋರಿಯಾಸಿಸ್ ದಿನದ ಅಂಗವಾಗಿ, ಭಾರತೀಯ ಚರ್ಮರೋಗ, ಲೈಂಗಿಕ ರೋಗ ಮತ್ತು ಕುಷ್ಠರೋಗ ತಜ್ಞರ ಸಂಘವು ಬೆಂಗಳೂರು ಚರ್ಮ ವೈದ್ಯರ ಸಂಘದ ಸಹಯೋಗದೊಂದಿಗೆ ಇದೇ 29 ರಂದು ಈ ರೋಗದ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚರ್ಮ ವೈದ್ಯರ ಸಂಘದ ಅಧ್ಯಕ್ಷ ಆರ್.ರಘುನಾಥ್ ರೆಡ್ಡಿ, ‘ಸೋರಿಯಾಸಿಸ್ ದೀರ್ಘಾವಧಿ ಚರ್ಮ ರೋಗ. ಚರ್ಮದ ಮೇಲೆ ದಪ್ಪವಾದ ಸಿಪ್ಪೆಯಂತಹ ಪದರಗಳು ಕಾಣಿಸಿಕೊಳ್ಳುವುದು ಇದರ ಲಕ್ಷಣ. ಸಾಮಾನ್ಯವಾಗಿ ತಲೆ, ಮೊಣಕೈ, ಮೊಣಕಾಲು ಮತ್ತು ಬೆನ್ನಿನಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಯಸ್ಸು ಮತ್ತು ಲಿಂಗಗಳ ಭೇದವಿಲ್ಲ’ ಎಂದು ತಿಳಿಸಿದರು.
‘ಈ ರೋಗಕ್ಕೆ ಶಾಶ್ವತ ಪರಿಹಾರವಿಲ್ಲ. ಜೀವನ ಶೈಲಿ ಬದಲಾವಣೆ ಮೂಲಕ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಸ್ಪರ್ಶದಿಂದ ಈ ರೋಗ ಹರಡುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಇದೊಂದು ಪ್ರತಿರೊಧ ಶಕ್ತಿ ಏರುಪೇರಿನಿಂದ ಬರುವ (ಆಟೋ ಇಮ್ಯೂನ್) ಕಾಯಿಲೆಯಾಗಿದೆ. ಸೋರಿಯಾಸಿಸ್ ಜೀವಕೋಶಗಳು ಅತಿಯಾಗಿ ವೃದ್ಧಿಯಾಗುವುದೇ ಇದಕ್ಕೆ ಕಾರಣ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.