ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ್ದ ಗೋಪುರವನ್ನು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಒತ್ತುವರಿ ಮಾಡಿಕೊಳ್ಳಲು ಮುಂದಾಗಿದೆ.
ಹಲಸೂರು ಕೆರೆ ಬಳಿ ಇರುವ ಈ ಗೋಪುರ ಸೇರಿದಂತೆ ನಗರದಲ್ಲಿರುವ ಮೂರು ಗಡಿಯಾರ ಗೋಪುರಗಳನ್ನು ಕ್ರಿ.ಶ.1597ರಲ್ಲಿ ನಿರ್ಮಿಸಲಾಗಿತ್ತು. ಇವುಗಳನ್ನು ಸುರಕ್ಷಿತ ಸ್ಮಾರಕಗಳು ಎಂದು ರಾಜ್ಯ ಪುರಾತತ್ವ ಇಲಾಖೆ ಹೇಳಿತ್ತು.
ಆದರೆ ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎಂಇಜಿ, ಸ್ಮಾರಕದ ಸುತ್ತಮುತ್ತಲಿನ ಪ್ರದೇಶವನ್ನು ಗುತ್ತಿಗೆ ಪಡೆದು ಆವರಣಕ್ಕೆ ಬೇಲಿ ಹಾಕುವ ಕೆಲಸಕ್ಕೆ ಮುಂದಾಗಿದೆ.
ಪಾಲಿಕೆ ಹಾಗೂ ಎಂಇಜಿ ನಡುವೆ ಯಾವುದೇ ಗುತ್ತಿಗೆ ಒಪ್ಪಂದ ನಡೆದಿಲ್ಲ. ಒಟ್ಟು ಭೂಮಿ 42,675 ಚದರ ಅಡಿ ಇದೆ. ಗೋಪುರ ಸೇರಿದಂತೆ ಎಲ್ಲ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಎಂಇಜಿ ಗೋಪುರ ಸೇರಿದಂತೆ ಸುತ್ತಲೂ ಬೇಲಿ ಹಾಕಿದ್ದು, ಅನುಮತಿಯಿಲ್ಲದೇ ಸಾರ್ವಜನಿಕರು ಪ್ರವೇಶಿಸದಂತೆ ನಿರ್ಬಂಧ ಹೇರಿದೆ.
ಲಾಲ್ಬಾಗ್, ಮೇಖ್ರಿ ವೃತ್ತ ಸಮೀಪದ ಬಿಡಿಎ ಉದ್ಯಾನ ಹಾಗೂ ಕೆಂಪೇಗೌಡ ನಗರದಲ್ಲಿ ಉಳಿದ ಮೂರು ಗೋಪುರಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.