ADVERTISEMENT

ಎಂಜಿನಿಯರ್ ಮೇಲೆ ಹಲ್ಲೆ; ಪೊಲೀಸರ ಸೋಗಿನಲ್ಲಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ಬೆಂಗಳೂರು: ವಿಜಯನಗರದ ಬಿಬಿಎಂಪಿ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್‌.ಮನೋಹರ್‌ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ವಿಜಯನಗರ ಪೊಲೀಸ್‌ ಠಾಣೆಗೆ ದೂರು ಕೊಟ್ಟಿರುವ ಮನೋಹರ್‌, ‘ಹಲ್ಲೆ ಮಾಡಿರುವ ದುಷ್ಕರ್ಮಿಗಳೇ ಆಂಧ್ರಪ್ರದೇಶ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ₹25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆವೊಡ್ಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ನಾನು, ಏ.11ರಂದು ಮಧ್ಯಾಹ್ನ ಕಚೇರಿಯಲ್ಲಿ ಚುನಾವಣಾ ಕರ್ತವ್ಯದಲ್ಲಿ ತೊಡಗಿದ್ದೆ. ಅದೇ ವೇಳೆ ಇನ್ನೋವಾ ಹಾಗೂ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಬಂದಿದ್ದ 8 ಮಂದಿ ಅಪರಿಚಿತರು, ನನ್ನ ಮೇಲೆ ಹಲ್ಲೆ ಮಾಡಿದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ದುಷ್ಕರ್ಮಿಗಳು, ಕಚೇರಿಯಲ್ಲೇ ಎಳೆದಾಡಿದರು. ‘ನೀವೆಲ್ಲಾ ಯಾರು’ ಎಂದು ಪ್ರಶ್ನಿಸಿದ್ದೆ. ಆಗ ಅವರು, ‘ನಾವು ಆಂಧ್ರ ಪೊಲೀಸರು’ ಎಂದು ಉತ್ತರಿಸಿ ಸ್ಥಳದಿಂದ ಹೊರಟು ಹೋದರು’ ಎಂದಿದ್ದಾರೆ.

‘ವ್ಯಕ್ತಿಯೊಬ್ಬರ ಬಳಿ ಹಣ ಪಡೆದುಕೊಂಡಿದ್ದೆ. ಅದಕ್ಕೆ ಶ್ಯೂರಿಟಿಯಾಗಿ ಚೆಕ್‌ ಹಾಗೂ ಬಾಂಡ್‌ ಕೊಟ್ಟಿದ್ದೆ. ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸಿದ್ದೆ. ಅಷ್ಟಾದರೂ ಆ ವ್ಯಕ್ತಿ, ನನ್ನ ವಿರುದ್ಧ ಚೆಕ್ ಬೌನ್ಸ್ ಮೊಕದ್ದಮೆ ಹೂಡಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆತನೇ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾನೆ’ ಎಂದು ದೂರಿನಲ್ಲಿ ಮನೋಹರ್‌ ಆರೋಪಿಸಿದ್ದಾರೆ.

ವಿಜಯನಗರ ಪೊಲೀಸರು, ‘ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿರುವ ಅನುಮಾನವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.