ADVERTISEMENT

ಐಪಿಎಲ್: ವೀಕ್ಷಕರಿಗೆ ಬಸ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:23 IST
Last Updated 3 ಏಪ್ರಿಲ್ 2013, 19:23 IST

ಬೆಂಗಳೂರು: ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ವೀಕ್ಷಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಿದೆ.

ಕ್ರೀಡಾಂಗಣಕ್ಕೆ ರಾತ್ರಿ 7.30ಕ್ಕೆ ತಲುಪುವಂತೆ ಸಂಜೆ 4 ಗಂಟೆಯಿಂದ ನಗರದ ವಿವಿಧ ಭಾಗಗಳಿಂದ ಸಂಚಾರದ ಒತ್ತಡಕ್ಕೆ ಅನುಗುಣವಾಗಿ ಬಸ್ಸುಗಳನ್ನು ನಿಯೋಜಿಸಲಾಗುವುದು. ಕ್ರಿಕೆಟ್ ಪಂದ್ಯ ಮುಗಿದ ನಂತರ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ತೆರಳಲು ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲಾಗುವುದು ಎಂದು ಬಿಎಂಟಿಸಿ ಪ್ರಕಟನೆ ತಿಳಿಸಿದೆ.

ಹೆಚ್ಚುವರಿ ಬಸ್‌ಗಳ ಮಾರ್ಗ: ಮಾಣಿಕ್ ಷಾ ಪೆರೇಡ್ ಮೈದಾನದಿಂದ  ಕಾಡುಗೋಡಿ ಬಸ್ ನಿಲ್ದಾಣ,ಮೆಯೋಹಾಲ್‌ನಿಂದ ಸರ್ಜಾಪುರ, ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಗ್ಗಲೀಪುರ ಮತ್ತು ಕೆಂಗೇರಿ ಕೆಹೆಚ್‌ಬಿ ಕ್ವಾರ್ಟರ್ಸ್‌, ಬಿಆರ್‌ವಿ ಪೆರೇಡ್ ಮೈದಾನದಿಂದ ಜನಪ್ರಿಯ ಟೌನ್‌ಶಿಪ್ ಮತ್ತು ಆರ್.ಕೆ.ಹೆಗಡೆ ನಗರ,  ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ ನೆಲಮಂಗಲ, ಯಲಹಂಕ ಉಪನಗರ, ಬಾಗಲೂರು, ಮೆಯೋಹಾಲ್‌ನಿಂದ ಹೊಸಕೋಟೆಗೆ ಬಸ್ ಸೌಕರ್ಯವಿದೆ.

ರಾತ್ರಿ 11.30ರ ತನಕ ಮೆಟ್ರೊ ರೈಲು
ಬೆಂಗಳೂರು
: ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಇರುವುದರಿಂದ ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ `ನಮ್ಮ ಮೆಟ್ರೊ' ರೈಲು ಸಂಚಾರ ವೇಳೆಯನ್ನು ರಾತ್ರಿ 11.30ರ ತನಕ ವಿಸ್ತರಿಸಲಾಗಿದೆ.

ಸದ್ಯ ಮೆಟ್ರೊ ರೈಲುಗಳು ರಾತ್ರಿ 10ರವರೆಗೆ ಸಂಚರಿಸುತ್ತಿವೆ. ಕ್ರಿಕೆಟ್ ವೀಕ್ಷಿಸಿ ಮನೆಗೆ ತೆರಳುವವರ ಅನುಕೂಲಕ್ಕಾಗಿ ಮೆಟ್ರೊ ರೈಲು ಸಂಚಾರ ಸಮಯವನ್ನು ಒಂದೂವರೆ ಗಂಟೆ ವಿಸ್ತರಿಸಲಾಗಿದೆ. ಆದರೆ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆಗೆ 11.10ಕ್ಕೆ ಕೊನೆ ರೈಲು ಹೊರಡಲಿದೆ. ಈ ಅವಧಿಯಲ್ಲಿ 15 ನಿಮಿಷಗಳಿಗೊಂದರಂತೆ ರೈಲು ಓಡಾಡಲಿವೆ. ಉಳಿದ ಪಂದ್ಯಗಳು ನಡೆಯುವ ದಿನಗಳಂದು ಬೇಡಿಕೆ ಅನುಸಾರ ರೈಲು ಸಂಚಾರ ವಿಸ್ತರಿಸಲಾಗುವುದು ಎಂದು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.