ADVERTISEMENT

ಒಂದೂವರೆ ದಿನ ಮೊದಲೇ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 20:00 IST
Last Updated 14 ಸೆಪ್ಟೆಂಬರ್ 2011, 20:00 IST

ಬೆಂಗಳೂರು: ನಗರದ ಪಾಸ್‌ಪೋರ್ಟ್ ಅರ್ಜಿದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಸಂದರ್ಶನ ದಿನಾಂಕ ಕುರಿತು ಒಂದೂವರೆ ದಿನ ಮುಂಚಿತವಾಗಿಯೇ ಮಾಹಿತಿ ನೀಡಲಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಡಾ. ಕೆ.ಜೆ.ಶ್ರೀನಿವಾಸ, `ಇದೇ 19ರಿಂದ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದಾಗಿ ಸೋಮವಾರದ ಸಂದರ್ಶನದ ದಿನಾಂಕದ ಬಗ್ಗೆ ಶನಿವಾರ ಸಂಜೆ ಆರು ಗಂಟೆ ನಂತರ ವಿವರಗಳು ಲಭಿಸಲಿವೆ~ ಎಂದರು.

`ಹಿಂದಿನ ವ್ಯವಸ್ಥೆಯಿಂದಾಗಿ ಅರ್ಜಿದಾರರಿಗೆ ಪಾಸ್‌ಪೋರ್ಟ್ ಕುರಿತು ಮಾಹಿತಿ ಪಡೆಯುವುದು ಕಷ್ಟವಾಗುತ್ತಿತ್ತು. ಅನೇಕರಿಗೆ ಅಂತರ್ಜಾಲ ಅಲಭ್ಯತೆ, ಮತ್ತಿತರ ತೊಂದರೆಗಳು ಉಂಟಾಗುವುದನ್ನು ಮನಗಂಡು ಒಂದೂವರೆ ದಿನ ಮುಂಚಿತವಾಗಿಯೇ ಸಂದರ್ಶನ ದಿನ ಗೊತ್ತುಪಡಿಸಲಾಗುತ್ತಿದೆ~ ಎಂದು ಹೇಳಿದರು.

`ವ್ಯಾಸಂಗ, ವೈದ್ಯಕೀಯ ಚಿಕಿತ್ಸೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಪಾಸ್‌ಪೋರ್ಟ್ ತ್ವರಿತವಾಗಿ ಅಗತ್ಯವಿದ್ದರೆ ಅಂತಹವರು ಕೋರಮಂಗಲದಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಬಹುದು. ಮಧ್ಯವರ್ತಿಗಳೊಡನೆ ಯಾವುದೇ ಕಾರಣಕ್ಕೂ ವ್ಯವಹರಿಸಬಾರದು~ ಎಂದು ಅವರು ಮನವಿ ಮಾಡಿದರು.

`2010ರಲ್ಲಿ ರಾಜ್ಯದಲ್ಲಿ 2,92,400 ಪಾಸ್‌ಪೋರ್ಟ್‌ಗಳನ್ನು ವಿತರಣೆ ಮಾಡಲಾಗಿದೆ. ಈ ವರ್ಷದ ಜುಲೈ ವೇಳೆಗೆ 2,17,518 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ. ಈ ವರ್ಷ 3.25 ಲಕ್ಷಕ್ಕೂ ಹೆಚ್ಚು ಪಾಸ್‌ಪೋರ್ಟ್‌ಗಳು ವಿತರಣೆಯಾಗುವ ಸಾಧ್ಯತೆ ಇದೆ. ಪ್ರತಿವರ್ಷ ವಿತರಣಾ ಪ್ರಮಾಣ ಹೆಚ್ಚುತ್ತಲೇ ಇದೆ~ ಎಂದ ಹೇಳೀದರು.

`ಪ್ರತಿದಿನ ರಾಜ್ಯದಲ್ಲಿ 2,575 ಸಂದರ್ಶನಗಳನ್ನು ನಡೆಸಲಾಗುತ್ತಿದೆ. ಲಾಲ್‌ಬಾಗ್ ರಸ್ತೆಯ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ 100 ಸಂದರ್ಶನಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ 900 ಸಾಮಾನ್ಯ ಮತ್ತು 200 ತತ್ಕಾಲ್ ಪಾಸ್‌ಪೋರ್ಟ್‌ಗಳಾಗಿವೆ. ಆದರೆ ಮಾರತ್‌ಹಳ್ಳಿಯಲ್ಲಿರುವ ಕೇಂದ್ರದಲ್ಲಿ ದಿನಕ್ಕೆ 725 ಪಾಸ್‌ಪೊರ್ಟ್‌ಗಳನ್ನು ವಿತರಿಸಲಾಗುತ್ತಿದೆ. ಇವುಗಳಲ್ಲಿ 600 ಸಾಮಾನ್ಯ ಮತ್ತು 125 ತತ್ಕಾಲ್ ಪಾಸ್‌ಪೋರ್ಟ್‌ಗಳಾಗಿವೆ. ಒತ್ತಡ ಕಡಿಮೆ ಇರುವುದರಿಂದ ಲಾಲ್‌ಬಾಗ್ ರಸ್ತೆಯ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದವರು ಒತ್ತಡ ಕಡಿಮೆ ಇರುವ ಮಾರತ್‌ಹಳ್ಳಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ~ ಎಂದು ವಿವರಿಸಿದರು.

`ಪ್ರತಿದಿನ ಹುಬ್ಬಳ್ಳಿಯಲ್ಲಿ 300, ಮಂಗಳೂರಿನಲ್ಲಿ 450 ಸಂದರ್ಶನಗಳನ್ನು ನಡೆಸಲಾಗುತ್ತಿದೆ. ತಾಂತ್ರಿಕವಾಗಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಹಳೆಯ ಡಿಪಿಸಿ ವ್ಯವಸ್ಥೆಯನ್ನೇ ಮುಂದುವರಿಸಲಾಗಿದೆ. ಗುಲ್ಬರ್ಗದಲ್ಲಿ ಹೆಚ್ಚು ಅರ್ಜಿಗಳನ್ನು ಸಲ್ಲಿಸುತ್ತಿರುವುದರಿಂದ ಅಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆದಿದೆ~ ಎಂದರು.

`ಸೂಕ್ತ ದಾಖಲೆಗಳ ಕೊರತೆ ಮತ್ತಿತರ ಕಾರಣಗಳಿಂದಾಗಿ ಈ ವರ್ಷ ಒಟ್ಟು 80,763 ಅರ್ಜಿಗಳನ್ನು ಬಾಕಿ ಉಳಿದಿವೆ. ಇವುಗಳಲ್ಲಿ 62,792 ಅರ್ಜಿಗಳು ವಿತರಣೆಯಾಗಬೇಕಿದ್ದ ನಿಗದಿತ ಗಡುವನ್ನು ದಾಟಿವೆ. ಬೆಂಗಳೂರಿನಲ್ಲಿ ಪೊಲೀಸ್ ಪರಿಶೀಲನೆಗೆ ಒಳಪಡಬೇಕಾದ 49,080 ಅರ್ಜಿಗಳಿವೆ.
 
ಗುಲ್ಬರ್ಗದಲ್ಲಿ 3,587, ಮಂಗಳೂರಿನಲ್ಲಿ 3,090, ಹುಬ್ಬಳ್ಳಿ ಧಾರವಾಡದಲ್ಲಿ 2514, ಉಡುಪಿಯಲ್ಲಿ 2494 ಅರ್ಜಿಗಳು ಪೊಲೀಸ್ ಪರಿಶೀಲನೆಗೆ ಕಾಯುತ್ತಿವೆ. ಅರ್ಜಿಗಳ ಶೀಘ್ರ ವಿಲೇವಾರಿ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದು ಪೊಲೀಸ್ ಅಧಿಕಾರಿಗಳು ಪೂರಕ ಪ್ರತಿಕ್ರಿಯೆ ನೀಡಿದ್ದಾರೆ~ ಎಂದು ಹೇಳಿದರು.

`1997ರಿಂದ ಸುಮಾರು 5000 ಅರ್ಜಿಗಳ ವಿಲೇವಾರಿಯಾಗಿಲ್ಲ. ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ. ಸೂಕ್ತ ದಾಖಲೆಗಳನ್ನು ಒದಗಿಸದೇ ಹೋದಲ್ಲಿ ಅವುಗಳನ್ನು ರದ್ದುಪಡಿಸಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.