ADVERTISEMENT

ಒಂದೇ ಮನೆಯಲ್ಲಿ ನಾಲ್ಕು ಬಾರಿ ಕಳವು ಮಾಡಿದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:32 IST
Last Updated 25 ಸೆಪ್ಟೆಂಬರ್ 2013, 19:32 IST

ಬೆಂಗಳೂರು: ಎಂಟು ತಿಂಗಳ ಅವಧಿಯಲ್ಲಿ  ಒಂದೇ ಮನೆಯಲ್ಲಿ ನಾಲ್ಕು ಬಾರಿ ಕಳವು  ಮಾಡಿದ್ದ ಬಿ.ಕಾಂ. ಪದವೀಧರನನ್ನು  ಹಾಗೂ ಗಿರವಿ ಅಂಗಡಿ ಮಾಲೀಕನನ್ನು  ಬಂಧಿ ಸಿರುವ ಕೆಂದ್ರ ಅಪರಾಧ ವಿಭಾಗದ  (ಸಿಸಿಬಿ) ಪೊಲೀಸರು, ಎಲೆಕ್ಟ್ರಾನಿಕ್‌ ಉಪಕ ರಣಗಳು ಸೇರಿದಂತೆ ₨ 5 ಲಕ್ಷ ಮೌಲ್ಯದ  ಚಿನ್ನಾಭರಣ  ವಶಪಡಿಸಿಕೊಂಡಿದ್ದಾರೆ.

ಜಯನಗರದ ಒಂಬತ್ತನೇ ಬ್ಲಾಕ್‌ ನಿವಾಸಿ ಯಶಸ್ (23) ಹಾಗೂ ಮೂರನೇ ಬ್ಲಾಕ್‌ನ ಸುನಿಲ್‌ಕುಮಾರ್ (32) ಬಂಧಿ ತರು. ಬಿ.ಕಾಂ ಪದವೀಧರನಾದ ಯಶಸ್‌, ಎಂಬಿಎ ಮಾಡುವ ಉದ್ದೇಶ ಹೊಂದಿದ್ದ. ಈ ಮಧ್ಯೆ ಮೋಜಿನ ಜೀವನಕ್ಕೆ ಕಟ್ಟು ಬಿದ್ದ ಆತ, ಹಣಕ್ಕಾಗಿ ತಿಲಕ್‌ನಗರದಲ್ಲಿರುವ ಸ್ನೇಹಿತ ಅಜಯ್‌ ಮನೆಯಲ್ಲಿ ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆಗಿಂದಾಗ್ಗೆ  ಅಜಯ್‌ ಮನೆಗೆ ಹೋಗುತ್ತಿದ್ದ ಆರೋಪಿ, ಅವರ ಕುಟುಂಬ ಸದಸ್ಯರು ಕೆಲಸದಲ್ಲಿ ತೊಡಗಿದ್ದಾಗ ಕೋಣೆಗೆ ತೆರಳಿ ಅಲ್ಮೆರಾದಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದ. ಬಳಿಕ ಏನೂ ಗೊತ್ತಿಲ್ಲದವನಂತೆ ಮನೆಗೆ ವಾಪಸ್‌ ಹೋಗುತ್ತಿದ್ದ. ಆದರೆ, ಯಶಸ್‌ ಮಗನ ಸ್ನೇಹಿತನೆಂಬ ಕಾರಣಕ್ಕೆ ಅಜಯ್ ಪೋಷಕರು ಆತನ ಮೇಲೆ ಸಂಶಯ ಪಟ್ಟಿರಲಿಲ್ಲ. ಆದರೆ, ನಿರಂತರವಾಗಿ ಮನೆಯಲ್ಲಿ ಚಿನ್ನಾಭರಣಗಳು, ಮೊಬೈಲ್‌ಗಳು ಕಳವಾಗುತ್ತಿದ್ದುದರಿಂದ ಅನುಮಾನಗೊಂಡ ಅವರು, ಈ ಸಂಬಂಧ ತಿಲಕ್‌ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯಶಸ್‌ ಸೇರಿ ದಂತೆ ಮನೆಗೆ ಬಂದು ಹೋಗುತ್ತಿದ್ದವರ ವಿಚಾರಣೆ ನಡೆಸಿದ್ದರು. ಇತ್ತೀಚೆಗೆ ಕಳವು ಪ್ರಕ ರಣವೊಂದರಲ್ಲಿ ಯಶಸ್‌ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಹಿಂದಿನ ಅಪರಾಧ ಪ್ರಕ ರಣಗಳ ಬಗ್ಗೆ ವಿಚಾರಿಸಿದಾಗ ‘ಸ್ನೇಹಿತ ಅಜಯ್ ಮನೆಯಲ್ಲಿ ನಾಲ್ಕು ಬಾರಿ ಕಳವು ಮಾಡಿದ್ದೇನೆ’ ಎಂದು ಒಪ್ಪಿಕೊಂಡಿದ್ದಾನೆ.

ಅಲ್ಲದೇ, ಕಳವು ಮಾಡಿದ ಆಭರಣಗಳನ್ನು ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಗಿರವಿ ಇಟ್ಟಿರುವುದಾಗಿಯೂ ಹೇಳಿದ್ದಾನೆ. ಈ ಮಾಹಿತಿ ಆಧರಿಸಿ ಪೊಲೀಸರು, ಕಳವು ಮಾಡಿದ ಆಭರಣಗಳನ್ನು ಕಡಿಮೆ ಬೆಲೆಗೆ ಖರೀದಿಸುವ ಚಾಳಿ ಹೊಂದಿದ್ದ ಸುನೀಲ್‌ನನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.