ADVERTISEMENT

ಒತ್ತುವರಿದಾರರ ತೆರವಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನಗರದ ಚಂದ್ರಾ ಲೇಔಟ್ ಮೊದಲ ಹಂತದಿಂದ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್ ಮಾರ್ಗವಾಗಿ ನಾಗರಬಾವಿ 80 ಅಡಿ ರಸ್ತೆಯವರೆಗಿನ ಮಾರ್ಗದ ಮಧ್ಯೆ ಇರುವ ಒತ್ತುವರಿದಾರರನ್ನು ತೆರವುಗೊಳಿಸಲು ಬಿಡಿಎಗೆ ಹೈಕೋರ್ಟ್ ಅನುಮತಿ ನೀಡಿದೆ.

ಈ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾವು ಮಧ್ಯೆ ಪ್ರವೇಶ ಮಾಡುವುದಿಲ್ಲ. ಇದೇನಿದ್ದರೂ ಸರ್ಕಾರ ಹಾಗೂ ಬಿಡಿಎ ಮಧ್ಯೆ ಇರುವ ಒಪ್ಪಂದ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿದೆ.

ರಸ್ತೆ ನಿರ್ಮಾಣಕ್ಕೆ ಈಗಾಗಲೇ ಬಿಡಿಎ ಸುಮಾರು 7.74 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರೂ, ಒತ್ತುವರಿದಾರರಿಂದಾಗಿ ನಿರ್ಮಾಣ ಕಾರ್ಯ ಸಾಗುತ್ತಿಲ್ಲ. ಆದರೆ ಬಿಡಿಎ ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಇದರಿಂದ ನಾಗರಬಾವಿ ತಲುಪಲು ತಮಗೆ ಕಷ್ಟ ಆಗುತ್ತಿದೆ ಎಂದು ದೂರಿ `ಚಂದ್ರಾ ಲೇಔಟ್ ಮೊದಲ ಹಂತದ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ~ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.

ಹೇಮಚಂದ್ರ ಸಾಗರ್ ಅರ್ಜಿ: ವಿಚಾರಣೆ ಮುಂದಕ್ಕೆ
ಭೂಹಗರಣಕ್ಕೆ ಸಂಬಂಧಿಸಿದಂತೆ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ದೂರು ದಾಖಲು ಮಾಡಿರುವ ವಕೀಲ ಸಿರಾಜಿನ್ ಬಾಷಾ ಅವರ ಮೇಲೆ ಕೆಲವು ಆರೋಪ ಮಾಡಿ ಶಾಸಕ ಡಾ. ಹೇಮಚಂದ್ರ ಸಾಗರ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಬಾಷಾ ಅವರಿಗೆ  ಹೈಕೋರ್ಟ್ ಆದೇಶಿಸಿದೆ.

`ಇಂತಹ ಪ್ರಕರಣಗಳ ವಿಚಾರಣೆಯನ್ನು ದೀರ್ಘಕಾಲ ಎಳೆಯುವಲ್ಲಿ ಅರ್ಥವಿಲ್ಲ. ಒಂದೇ ಬಾರಿ ಇತ್ಯರ್ಥಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬರುವ ಸೋಮವಾರದ ಒಳಗೆ ಆಕ್ಷೇಪಣೆ ಸಲ್ಲಿಸಿ~ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಬಾಷಾ ಪರ ವಕೀಲರಿಗೆ ತಿಳಿಸಿದರು.

`ಸಾಗರ್ ಹೆಲ್ತ್ ಗ್ರೂಪ್~ ಅಧ್ಯಕ್ಷರೂ ಆಗಿರುವ ಸಾಗರ್ ಅವರು ಉತ್ತರಹಳ್ಳಿ ಬಳಿಯ ನಿವೇಶನವೊಂದನ್ನು ಡಿನೋಟಿಫೈ ಮಾಡುವ ಸಂಬಂಧ 3.35 ಕೋಟಿ ರೂಪಾಯಿಗಳನ್ನು ಯಡಿಯೂರಪ್ಪನವರ ಮಕ್ಕಳು ನಿರ್ದೇಶಕರಾಗಿರುವ `ಸಹ್ಯಾದ್ರಿ ಹೆಲ್ತ್ ಕೇರ್~ಗೆ ನೀಡಿರುವುದಾಗಿ ಬಾಷಾ ಆರೋಪಿಸ್ದ್ದಿದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎನ್ನುವುದು ಸಾಗರ್ ಅವರ ವಾದ. ಈ ಕುರಿತು ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಅವರು ಕೋರ್ಟ್ ಅನ್ನು ಕೋರಿದ್ದಾರೆ.

ಕಟ್ಟಾ ಅರ್ಜಿ: ವಿಚಾರಣೆ ಮುಂದಕ್ಕೆ

ಕೆಐಎಡಿಬಿ ಭೂಹಗರಣದಲ್ಲಿ ಸಿಲುಕಿ ಬಂಧಿತರಾಗಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಅವರು ಸಲ್ಲಿಸಿರುವಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಆರೋಪಗಳಿಗೆ ಸಂಬಂಧಿಸಿದಂತೆ ದಾಖಲು ಮಾಡಲಾದ ದೂರನ್ನು ಲೋಕಾಯುಕ್ತ ವಿಶೇಷ ಕೋರ್ಟ್ ವಿಚಾರಣೆಗೆ ಅಂಗೀಕರಿಸಿರುವುದನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.