ADVERTISEMENT

ಕಟ್ಟಡದಿಂದ ಬಿದ್ದು ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ಬೆಂಗಳೂರು: ನಗರದ ಎಚ್‌ಎಎಲ್ ಮತ್ತು ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿದಂತೆ ಇಬ್ಬರು ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಎಚ್‌ಎಎಲ್ ಸಮೀಪದ ತಲಕಾವೇರಿ ಲೇಔಟ್‌ನಲ್ಲಿನ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬನ್ನಮ್ಮ (35) ಎಂಬುವರು ಸೋಮವಾರ ಬೆಳಿಗ್ಗೆ ಕಟ್ಟಡದ ಐದನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ಬನ್ನಮ್ಮ, ಕುಟುಂಬ ಸದಸ್ಯರೊಂದಿಗೆ ಆ ಅಪಾರ್ಟ್‌ಮೆಂಟ್‌ನ ಸಮೀಪವೇ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದರು. ಅವರು ಕಟ್ಟಡದ ಐದನೇ ಅಂತಸ್ತಿನಲ್ಲಿ ಗೋಡೆಗೆ ನೀರು ಹಾಕುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.


ಪ್ಲಾಸ್ಟಿಕ್ ಪೈಪ್ ಅನ್ನು ದಾಟುವ ವೇಳೆ ಎಡವಿದ ಬನ್ನಮ್ಮ ಅವರು ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಎಚ್‌ಎಎಲ್ ಠಾಣೆ ಪೊಲೀಸರು, ಕಟ್ಟಡದ ಮಾಲೀಕ ಪದ್ಮಯ್ಯ ಮತ್ತು ಸೈಟ್ ಎಂಜಿನಿಯರ್ ಸಾಂಬಶಿವರಾಜ್ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ದೂರು ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣ: ಜ್ಞಾನಭಾರತಿ ಬಳಿಯ ರಾಮಕೃಷ್ಣಪ್ಪ ಬಡಾವಣೆಯಲ್ಲಿ ಭಾನುವಾರ ರಾತ್ರಿ ಪಾನಮತ್ತ ವ್ಯಕ್ತಿಯೊಬ್ಬರು ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಕೇರಳ ಮೂಲದ ಉನ್ನಿಸ್ (30) ಮೃತಪಟ್ಟವರು. ರಾಮಕೃಷ್ಣಪ್ಪ ಬಡಾವಣೆಯಲ್ಲಿನ ವಾಣಿಜ್ಯ ಸಮುಚ್ಚಯವೊಂದರಲ್ಲಿ ಚಪ್ಪಲಿ ಅಂಗಡಿ ಇಟ್ಟುಕೊಂಡಿದ್ದ ಅವರು, ಆ ವಾಣಿಜ್ಯ ಸಮುಚ್ಚಯದ ಮಹಡಿಯ ಕೊಠಡಿಯಲ್ಲಿ ವಾಸವಾಗಿದ್ದರು. ಸ್ನೇಹಿತರೊಂದಿಗೆ ರಾತ್ರಿ ಮದ್ಯಪಾನ ಮಾಡಿದ್ದ ಉನ್ನಿಸ್, ಕೊಠಡಿಯ ಮುಂಭಾಗದಲ್ಲಿ ನಡೆದಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.