ADVERTISEMENT

ಕತ್ತು ಕೊಯ್ದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST

ಬೆಂಗಳೂರು: ಜೆ.ಪಿ ನಗರದ 5ನೇ ಹಂತದಲ್ಲಿ ಶನಿವಾರ ರಾತ್ರಿ ಸುರೇಶ್‌ಕುಮಾರ್ (26) ಎಂಬುವರನ್ನು ಅವರ ಸ್ನೇಹಿತರೇ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಪುಟ್ಟೇನಹಳ್ಳಿಯ ಪುಷ್ಪಾಂಜಲಿ ಕಲ್ಯಾಣ ಮಂಟಪದ ಬಳಿ ವಾಸವಿದ್ದ ಸುರೇಶ್‌, ರಿಯಲ್‌ ಎಸ್ಟೇಟ್‌ ಏಜೆಂಟರಾಗಿದ್ದರು. ಕಾರ್ಪೊರೇಟರ್‌ ಪದ್ಮಾವತಿ ರಮೇಶ್‌ ಅವರ ಕಾರು ಚಾಲಕರಾಗಿಯೂ ಕೆಲಸ ಮಾಡಿದ್ದರು.

‘ಶನಿವಾರ ಬೆಳಿಗ್ಗೆ ನಾಲ್ವರು ಸ್ನೇಹಿತರನ್ನು ಸಂಪರ್ಕಿಸಿದ್ದ ಸುರೇಶ್‌, ರಾತ್ರಿ ಪಾರ್ಟಿಗೆ ಬರುವಂತೆ ಆಹ್ವಾನಿಸಿದ್ದರು. ತಡರಾತ್ರಿ 10 ಗಂಟೆಗೆ ಸ್ನೇಹಿತರೆಲ್ಲ ಸೇರಿ ಜೆ.ಪಿ.ನಗರದ 5ನೇ ಹಂತದಲ್ಲಿದ್ದ ತೋಟಕ್ಕೆ ಹೋಗಿದ್ದರು. ಅಲ್ಲಿಯೇ ರಾತ್ರಿ 2 ಗಂಟೆಯವರೆಗೆ ಮದ್ಯ ಕುಡಿಯುತ್ತ ಕುಳಿತಿದ್ದರು.’

ADVERTISEMENT

‘ಕ್ಷುಲಕ ಕಾರಣಕ್ಕಾಗಿ ಸ್ನೇಹಿತರ ನಡುವೆ ಗಲಾಟೆ ಶುರುವಾಗಿತ್ತು. ಮದ್ಯದ ಬಾಟಲಿ ಒಡೆದಿದ್ದ ಸ್ನೇಹಿತನೊಬ್ಬ, ಅದರ ಚೂರಿನಿಂದ ಸುರೇಶ್‌ ಅವರ ಕತ್ತು ಕೊಯ್ದಿದ್ದ. ತೀವ್ರ ರಕ್ತಸ್ರಾವವಾಗಿ ಅವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪತ್ತೆಗೆ ವಿಶೇಷ ತಂಡ ರಚನೆ: ‘ಸುರೇಶ್‌ ಮೃತಪಟ್ಟಿದ್ದು ಗೊತ್ತಾಗುತ್ತಿದ್ದಂತೆ ಸ್ನೇಹಿತರೆಲ್ಲ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

‘ಕೊಲೆಗೆ ಇದುವರೆಗೂ ಕಾರಣ ಗೊತ್ತಾಗಿಲ್ಲ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ನಾಲ್ವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಅವರಲ್ಲಿ ಇಬ್ಬರು ರಿಯಲ್‌ ಎಸ್ಟೇಟ್‌ ಏಜೆಂಟರು ಎಂಬುದು ಗೊತ್ತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.