ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹೊಂದಿಕೊಂಡಂತಿರುವ ಕನ್ನಳ್ಳಿ ಕೆರೆಯಂಗಳದಲ್ಲಿ ಮಣ್ಣು ಹಾಗೂ ಕಟ್ಟಡ ತ್ಯಾಜ್ಯ ಸುರಿದು ರಸ್ತೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೆಲವು ರಾಜಕಾರಣಿಗಳ ಕುಮ್ಮಕ್ಕು ಇದೆ ಎಂದು ಸ್ಥಳೀಯರು ದೂರಿದರು.
ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಕೆರೆ ತುಂಬಿ ಕೋಡಿ ಹರಿದಿದೆ. ತ್ಯಾಜ್ಯ ಮತ್ತು ಮಣ್ಣು ಸುರಿಯುವುದರಿಂದ ಜಲಮೂಲಕ್ಕೂ ತೊಂದರೆ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘ಈ ಹಿಂದೆ ಜಲಮೂಲದ ನೀರನ್ನು ಕುಡಿಯಲು ಹಾಗೂ ವ್ಯವಸಾಯಕ್ಕೆ ಬಳಸಲಾಗುತ್ತಿತ್ತು. ಕೆರೆಯ ಸುತ್ತಲೂ ಬಡಾವಣೆ ನಿರ್ಮಾಣವಾಗುತ್ತಿರುವುದರಿಂದ ವ್ಯವಸಾಯ ಸ್ಥಗಿತಗೊಂಡಿದೆ. ಬಡಾವಣೆಗೆ ಶೃಂಗಾರ ಬರಬೇಕಾದರೆ ಕೆರೆ ಉಳಿಯಬೇಕು. ಈ ನಿಟ್ಟಿನಲ್ಲಿ ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಶಾಸಕರು ಮುಂದಾಗಿದ್ದರು. ಆದರೆ, ಒತ್ತುವರಿ ತೆರವು ಮಾಡದ ಕಾರಣ ಈ ಪ್ರಸ್ತಾವ ನನೆಗುದಿಗೆ ಬಿದ್ದಿದೆ’ ಎಂದು ಕನ್ನಳ್ಳಿ ವೀರಭದ್ರಸ್ವಾಮಿ ನಿತ್ಯಾನ್ನ ದಾಸೋಹ ಸಮಿತಿಯ ಅಧ್ಯಕ್ಷ ಎಸ್.ಶಾಂತರಾಜು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.