ADVERTISEMENT

ಕರ್ತವ್ಯ ಲೋಪದ ಆರೋಪ: ಕಾನ್‌ಸ್ಟೇಬಲ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಬೆಂಗಳೂರು:  ರೌಡಿಯೊಬ್ಬನ ಮಗಳ ಜತೆ ಅನೈತಿಕ ಸಂಬಂಧ ಹೊಂದಿದ್ದ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ವಿವೇಕನಗರ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಸೇವೆಯಿಂದ ಅಮಾನತು ಮಾಡಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾನುವಾರ ಆದೇಶ ಹೊರಡಿಸಿದ್ದಾರೆ.

ನವಾಬ್‌ಖಾನ್ ಮತ್ತು ರೂಪೇಶ್ ಅಮಾನತುಗೊಂಡ ಕಾನ್‌ಸ್ಟೇಬಲ್‌ಗಳು. ರೌಡಿ ಪಳನಿರಾಜು ಎಂಬಾತನ ಮಗಳ ಜತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ನವಾಬ್‌ಖಾನ್ ಅವರನ್ನು ಹಾಗೂ ಅವರಿಗೆ ಸಹಕರಿಸಿದ ಆರೋಪದ ಮೇಲೆ ರೂಪೇಶ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

`ಈ ಸಂಬಂಧ ಪಳನಿರಾಜುವಿನ ಅಳಿಯ ರೋಹನ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮೀಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ವಿವೇಕನಗರ ಎಸ್‌ಐ ನಯಾಜ್ ಅಹಮ್ಮದ್ ಅವರಿಗೆ ಸುನೀಲ್‌ಕುಮಾರ್ ಆದೇಶಿಸಿದ್ದರು. ಆದರೆ, ವರದಿ ನೀಡುವಲ್ಲಿ ವಿಳಂಬ ಮಾಡಿದ ಕಾರಣಕ್ಕೆ ನಯಾಜ್ ಅವರಿಗೆ ನೋಟಿಸ್ ನೀಡಲಾಗಿದೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

`ನವಾಬ್‌ಖಾನ್ ಅವರು, ಪತ್ನಿಯೊಂದಿಗೆ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ಸಂಬಂಧ ದೂರು ನೀಡಲು ಠಾಣೆಗೆ ಹೋದಾಗ ಕಾನ್‌ಸ್ಟೇಬಲ್ ರೂಪೇಶ್ ಅವರು ನವಾಬ್‌ಖಾನ್ ಜತೆ ಸೇರಿಕೊಂಡು ನನಗೆ ಬೆದರಿಕೆ ಹಾಕಿದರು~ ಎಂದು ರೋಹನ್ ದೂರಿನಲ್ಲಿ ತಿಳಿಸಿದ್ದಾರೆ.

`ಮೂರು ವರ್ಷದ ಹಿಂದೆ ಮಗಳನ್ನು ರೋಹನ್‌ಗೆ ಕೊಟ್ಟು ವಿವಾಹ ಮಾಡಿದ್ದೆ. ಸಣ್ಣ ಪುಟ್ಟ ಕಾರಣಕ್ಕೂ ಅಳಿಯ, ಮಗಳ ಜತೆ ಜಗಳವಾಡುತ್ತಿದ್ದ. ಅಲ್ಲದೇ, ಮಗಳ ಶೀಲದ ಬಗ್ಗೆ ಶಂಕಿಸುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಮಗಳು ನವಾಬ್‌ಖಾನ್ ಬಳಿ ಹೋಗಿ ಅಳಲು ತೋಡಿಕೊಂಡಿದ್ದಳು. ನವಾಬ್‌ಖಾನ್ ಅವರ ಮೊಬೈಲ್‌ಗೆ ಕರೆ ಮಾಡಿ, ಪತಿಗೆ ಬುದ್ಧಿಮಾತು ಹೇಳುವಂತೆ ಕೇಳಿಕೊಳ್ಳುತ್ತಿದ್ದಳು~ ಎಂದು ಪಳನಿರಾಜು ಪತ್ನಿ ರೇವತಿ ಹೇಳಿದರು.

`ಮಗಳ ಮೊಬೈಲ್ ಕರೆಯ ವಿವರಗಳನ್ನು ಪರಿಶೀಲಿಸಿದ ರೋಹನ್, ಮಗಳಿಗೂ ಮತ್ತು ನವಾಬ್‌ಖಾನ್ ನಡುವೆ ಸಂಬಂಧವಿದೆ ಎಂದು ಶಂಕಿಸಿದ್ದಾನೆ. ಆದರೆ, ಕಾನ್‌ಸ್ಟೇಬಲ್‌ಗೂ ಮತ್ತು ಮಗಳಿಗೂ ಯಾವುದೇ ಸಂಬಂಧವಿಲ್ಲ. ಅಳಿಯ ಮಾನಸಿಕ ಅಸ್ವಸ್ಥನಾಗಿದ್ದು, ಇಂತಹ ಸನ್ನಿವೇಶ ಸೃಷ್ಟಿಸಿದ್ದಾನೆ. ಮಗಳ ಮೇಲೆ ಪೊಲೀಸ್ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಕೆಲ ವಾಹಿನಿಗಳು ಸುಳ್ಳು ಸುದ್ದಿ ಪ್ರಸಾರ ಮಾಡಿವೆ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.