ADVERTISEMENT

ಕಳವು: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 18:55 IST
Last Updated 22 ಆಗಸ್ಟ್ 2012, 18:55 IST

ಬೆಂಗಳೂರು:  ಶಾಲೆಯ ಬೀಗ ಮುರಿದು ಹಣದ ತಿಜೋರಿ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೋರಮಂಗಲ ಪೊಲೀಸರು, 22.37 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

ನಾಗಲ್ಯಾಂಡ್ ಮೂಲದ ಸಮೀರ್ ಆಲಿ  (24), ಪಾಪುಲ್ಲಾ ಗೊಗೈ (24), ಲಿಮಾಸಿಂಗಿಟ್ (22)  ಮತ್ತು ಅಸ್ಸಾಂನ ರಾಜು ಪ್ರಧಾನ್ (37) ಬಂಧಿತರು. ಆರೋಪಿಗಳು ಆಗಸ್ಟ್ 17ರಂದು ವರ್ತೂರು ಮುಖ್ಯ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಶಾಲೆಗೆ ನುಗ್ಗಿ ತಿಜೋರಿ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂರ‌್ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು ಯಶವಂತಪುರದಲ್ಲಿ ವಾಸವಾಗಿದ್ದರು. ಸಮೀರ್ ಮತ್ತು ಪಾಪುಲ್ಲಾ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿದ್ದರು. ಉಳಿದ ಆರೋಪಿಗಳು ಯಶವಂತಪುರದ ಖಾಸಗಿ ಕಂಪೆನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದರು.

ಸಮೀರ್ ಮತ್ತು ಪಾಪುಲ್ಲಾ ಅವರು ಶಾಲೆಯ ತಿಜೋರಿಯಲ್ಲಿ ಹಣವಿರುವ ಬಗ್ಗೆ ಮಾಹಿತಿ ತಿಳಿದು ಅದನ್ನು ದೋಚಲು ಸಂಚು ರೂಪಿಸಿದ್ದರು. ಅದಕ್ಕಾಗಿ ಲಿಮಾಸಿಂಗಿಟ್ ಮತ್ತು ರಾಜು ಪ್ರಧಾನ್‌ರ ನೆರವು ಕೇಳಿದ್ದರು. ಸಂಚಿನಂತೆ ಶಾಲೆಗೆ ನುಗ್ಗಿದ ಆರೋಪಿಗಳು ತಿಜೋರಿಯನ್ನು ಹೊಡೆಯಲು ಯತ್ನಿಸಿ ವಿಫಲರಾದ ಕಾರಣ ತಿಜೋರಿಯನ್ನೇ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

`ಕೋರಮಂಗಲದ ಒಂದನೇ ಬ್ಲಾಕ್‌ನ ಜಕ್ಕಸಂದ್ರದಲ್ಲಿರುವ ಸ್ಮಶಾನದ ಬಳಿ ನಾಲ್ವರು ವ್ಯಕ್ತಿಗಳು ತಿಜೋರಿಯೊಂದಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ ಯಾರೋ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಹೋದಾಗ ಆರೋಪಿಗಳು ತಿಜೋರಿಯನ್ನು ಹೊಡೆಯುವ ಯತ್ನದಲ್ಲಿದ್ದರು. ಈ ವೇಳೆ ಅವರನ್ನು ಬಂಧಿಸಲಾಯಿತು. ತಿಜೋರಿಯ ಬೀಗ ತೆಗೆದು ನೋಡಿದಾಗ ಅದರಲ್ಲಿ 22.37 ಲಕ್ಷ ರೂಪಾಯಿ ಹಣವಿತ್ತು~ ಎಂದು ಮಡಿವಾಳ ಉಪ ವಿಭಾಗದ ಎಸಿಪಿ ಸುಬ್ಬಣ್ಣ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.