ಬೆಂಗಳೂರು: ‘ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಗೆ ಧಮ್ಮಿಲ್ಲ. ಬಿಜೆಪಿಯ ದುರಾಡಳಿತ, ದೌರ್ಜನ್ಯಗಳನ್ನು ಸಮರ್ಥವಾಗಿ ಎದುರಿಸಲು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ’ ಎಂದು ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ, ಸಂಸದ ಅಸಾದುದ್ದೀನ್ ಒವೈಸಿ ಹೇಳಿದರು.
ಗೋರಿಪಾಳ್ಯದಲ್ಲಿ ಶುಕ್ರವಾರ ರಾತ್ರಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕದ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದೂ ಮನವಿ ಮಾಡಿದರು.
‘ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಅಧಿಕಾರದಲ್ಲಿದ್ದು ಜನರ ಹಣ ಲೂಟಿ ಮಾಡಿ ಹಂಚಿಕೊಳ್ಳುತ್ತಿವೆ’ ಎಂದರು.
‘ಮಾಧ್ಯಮಗಳು ಕುಮಾರಸ್ವಾಮಿಯನ್ನು ಕಿಂಗ್ಮೇಕರ್ ಎನ್ನುತ್ತಿವೆ. ಆದರೆ, ಕುಮಾರಸ್ವಾಮಿ ಕಿಂಗ್ಮೇಕರ್ ಅಲ್ಲ, ಸ್ವತಃ ಕಿಂಗ್ ಆಗುವ ದಿನಗಳು ದೂರವಿಲ್ಲ’ ಎಂದರು.
‘ಬಿಬಿಎಂಪಿ ಚುನಾವಣೆಯಲ್ಲಿ ನನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ನನಗೆ ಭಾಷಣ ಮಾಡಲು ಅವಕಾಶ ನೀಡಲಿಲ್ಲ. ಪೊಲೀಸರ ಮೂಲಕ ನಿರ್ಬಂಧ ಹೇರಿತು. ಭಾಷಣ ಮಾಡುವುದಿಲ್ಲ, ಪಾದಯಾತ್ರೆ ಮಾಡುತ್ತೇನೆ ಅಂದರೂ ಬಿಡಲಿಲ್ಲ. ವಾಸ್ತವ್ಯ ಹೂಡಿದ್ದ ಹೋಟೆಲ್ನಿಂದಲೂ ಬಲವಂತವಾಗಿ ಹೊರಗೆ ಕಳಿಸಿದರು. ಬೆಂಗಳೂರಿನ ಹೊರವಲಯದಲ್ಲಿ ನಾನು ಉಳಿದುಕೊಳ್ಳಬೇಕಾಯಿತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.