ADVERTISEMENT

ಕಾರು ಡಿಕ್ಕಿ: ಪಾದಚಾರಿ ಸಾವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:58 IST
Last Updated 21 ಏಪ್ರಿಲ್ 2013, 19:58 IST

ಹೊಸಕೋಟೆ: ಕೋಲಾರ ರಸ್ತೆಯ ಎಂವಿಜೆ ಆಸ್ಪತ್ರೆ ಬಳಿ ಕಾರು ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.

ತಾಲ್ಲೂಕಿನ ವಾಗಟ ಗ್ರಾಮದ ಮುಸ್ತಫಾ (50) ಮೃತಪಟ್ಟವರು. ಹೆದ್ದಾರಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಅವರು ಬಂದಿದ್ದರು. ಕಾರು ಹೊಸಕೋಟೆ ಕಡೆಯಿಂದ ಕೋಲಾರದ ಕಡೆಗೆ ಹೋಗುತ್ತಿತ್ತು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಳವು: ಪಟ್ಟಣದ ಕಾಲೇಜು ರಸ್ತೆಯಲ್ಲಿನ ಮೊಬೈಲ್ ಮಾರಾಟ ಅಂಗಡಿಯ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ರೂ. 35 ಸಾವಿರ ನಗದು, ಸ್ಯಾಮ್‌ಸಂಗ್ ಹಾಗೂ ಇತರ ಕಂಪೆನಿಗಳಿಗೆ ಸೇರಿದ 45 ಮೊಬೈಲ್‌ಗಳನ್ನು ಕಳವು ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕಳವಾದ ವಸ್ತುಗಳ ಒಟ್ಟು ಬೆಲೆ ರೂ. 4.65 ಲಕ್ಷ ಎಂದು ಅಂಗಡಿಯ ಮಾಲೀಕ ನವೀದ್ ಅಹಮದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

ವಶ: ಹೆದ್ದಾರಿಯ ಕಾಟಂನಲ್ಲೂರು ಕ್ರಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು 2 ಕಾರುಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು ರೂ. 4.50 ಲಕ್ಷ ನಗದನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ. ಕಾರುಗಳು ಬೆಂಗಳೂರು ಕಡೆಯಿಂದ ಕೋಲಾರದ ಕಡೆಗೆ ಹೋಗುತ್ತಿದ್ದವು. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.