ADVERTISEMENT

ಕಾರು ಡಿಕ್ಕಿ: ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಬೆಂಗಳೂರು: ಕಾರು ಡಿಕ್ಕಿ ಹೊಡೆದು ಐದು ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ವರ್ತೂರು- ಬಳಗೆರೆ ರಸ್ತೆಯಲ್ಲಿ ಸೋಮವಾರ ನಡೆದಿದೆ.

ಕೂಲಿ ಕಾರ್ಮಿಕ ಬಸವರಾಜು ಎಂಬುವರ ಪುತ್ರಿ ಉಮಾದೇವಿ ಮೃತಪಟ್ಟ ಬಾಲಕಿ. ಬಸವರಾಜು ಅವರ ತಮ್ಮ ನಾಗರಾಜು ಅವರು ಕೂಲಿ ಕಾರ್ಮಿಕರಾಗಿದ್ದು, ನಗರದ ಬಳಗೆರೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಬಸವರಾಜು ಅವರು, ತಾಯಿ ಈರಮ್ಮ, ಪತ್ನಿ ಮತ್ತು ಮಕ್ಕಳೊಂದಿಗೆ ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ಈರಮ್ಮ ಅವರು ಮೊಮ್ಮಗಳು ಉಮಾದೇವಿಯನ್ನು ಕರೆದುಕೊಂಡು ಕಿರಿಯ ಮಗ ನಾಗರಾಜು ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಸೋಮವಾರ ಬೆಳಗಿನ ಜಾವ ಬಳ್ಳಾರಿಯಿಂದ ನಗರಕ್ಕೆ ಬಂದ ಈರಮ್ಮ ಮತ್ತು ಉಮಾದೇವಿ, ಮೆಜೆಸ್ಟಿಕ್‌ನಿಂದ ಬಿಎಂಟಿಸಿ ಬಸ್‌ನಲ್ಲಿ ವರ್ತೂರಿಗೆ ಬಂದರು. ಬಸ್‌ನಿಂದ ಕೆಳಗಿಳಿದ ಈರಮ್ಮ ಅವರು ಸಮೀಪದ ಹೋಟೆಲ್‌ನಲ್ಲಿ ಕಾಫಿ ಕುಡಿದು, ಮೊಮ್ಮಗಳಿಗೆ ಸಿಹಿ ತಿನಿಸು ಕೊಡಿಸಿದರು. ನಂತರ ಅವರು ಬಳಗೆರೆಗೆ ನಡೆದು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಉಮಾದೇವಿಯ ಕೈಯಿಂದ ತಿನಿಸು ಜಾರಿ ಕೆಳಗೆ ಬಿದ್ದಿತು. ಉಮಾದೇವಿ ಅಜ್ಜಿಯ ಕೈ ಬಿಡಿಸಿಕೊಂಡು ಅದನ್ನು  ತೆಗೆದುಕೊಳ್ಳಲು ರಸ್ತೆಗೆ ಓಡಿ ಹೋದಾಗ ಅದೇ ಮಾರ್ಗವಾಗಿ ಬಂದ ಕಾರು ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದಳು ಎಂದು ಪೊಲೀಸರು ತಿಳಿಸಿದ್ದಾರೆ.

ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.