ADVERTISEMENT

ಕಾರ್ಪೊರೇಟರ್‌ ಪತಿಯ ಬೆಂಬಲಿಗರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:41 IST
Last Updated 9 ಏಪ್ರಿಲ್ 2018, 19:41 IST

ಬೆಂಗಳೂರು: ತಿಪ್ಪಸಂದ್ರದ ರೆಹಮಾನ್‌ ಟೀ ಅಂಗಡಿ ಎದುರು ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಈ ಸಂಬಂಧ ಜೀವನ್‌ಬಿಮಾ ನಗರ ಠಾಣೆಯಲ್ಲಿ ದೂರು –ಪ್ರತಿದೂರು ದಾಖಲಾಗಿದೆ.

‘ಹೊಸ ತಿಪ್ಪಸಂದ್ರ ವಾರ್ಡ್‌ನ ಕಾರ್ಪೊರೇಟರ್‌ ಶಿಲ್ಪಾರ ಪತಿ ಅಭಿಲಾಷ್ ರೆಡ್ಡಿಯವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳಾದ ವಿಜಯ್‌ ಹಾಗೂ ಸುರೇಶ್‌ ಆರೋಪಿಸಿದ್ದಾರೆ. ಅದಕ್ಕೆ ಪ್ರತಿ ದೂರು ನೀಡಿರುವ ಮಂಜುನಾಥ್‌ ಹಾಗೂ ಸ್ವಾಮಿನಾಥನ್‌, ‘ವಿಜಯ್‌ ಹಾಗೂ ಸುರೇಶ್‌ ಅವರೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

ಪೊಲೀಸರು, ‘ಘಟನೆಯಲ್ಲಿ ನಾಲ್ವರೂ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದರು.

ADVERTISEMENT

ಕಾಮಗಾರಿ ಪ್ರಶ್ನಿಸಿದ್ದಕ್ಕೆ ಹಲ್ಲೆ: ‘ನನ್ನ ಸಹೋದರ ಸುರೇಶ್‌, ಸ್ಟೀಲ್ ಅಂಗಡಿ ಇಟ್ಟುಕೊಂಡಿದ್ದಾರೆ. ಅದರ ಮುಂದೆ ಹಲವು ದಿನಗಳಿಂದ ಕಾಮಗಾರಿ ನಡೆಯುತ್ತಿದೆ. ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಕಾರ್ಪೊರೇಟರ್‌ ಅವರ ಪತಿ ಅಭಿಲಾಷ್ ರೆಡ್ಡಿ ಅವರನ್ನು ಕೋರಿದ್ದೆ. ಅದೇ ಕಾರಣಕ್ಕೆ ಅವರ ಬೆಂಬಲಿಗರು, ಅಂಗಡಿ ಬಳಿ ಬಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ’ ಎಂದು ವಿಜಯ್‌ ಸುದ್ದಿಗಾರರಿಗೆ ತಿಳಿಸಿದರು.

‘ಬೇಗ ಕಾಮಗಾರಿ ನಡೆಸಬೇಕಾದ್ರೆ ₹2 ಲಕ್ಷ ಬೇಕು. ನೀನು ಕೊಡ್ತೀಯಾ’ ಎಂದು ಅಭಿಲಾಷ್‌ ಬೆದರಿಕೆವೊಡ್ಡಿ
ದ್ದಾರೆ’ ಎಂದು ಅವರು ದೂರಿದರು.

ಆರೋಪದ ಬಗ್ಗೆ ‘‍ಪ್ರಜಾವಾಣಿ’ ಜತೆ ಮಾತನಾಡಿದ ಅಭಿಲಾಷ್‌ ರೆಡ್ಡಿ, ‘ನನಗೂ ಗಲಾಟೆಗೂ ಯಾವುದೇ ಸಂಬಂಧವಿಲ್ಲ. ನಾಲ್ವರೂ ಸೇರಿಯೇ ಪಾರ್ಟಿ ಮಾಡಿದ್ದಾರೆ. ಅಲ್ಲಿಯೇ ಕ್ಷುಲಕ ಕಾರಣಕ್ಕೆ ಜಗಳ ತೆಗೆದು ಗಲಾಟೆ ಮಾಡಿಕೊಂಡಿದ್ದಾರೆ’ ಎಂದರು.

‘ಜನಾಶೀರ್ವಾದ ಸಮಾರೋಪ ಸಮಾರಂಭಕ್ಕೆ ಭಾನುವಾರ ಹೋಗಿದ್ದೆ. ರಾತ್ರಿಯೇ ಮನೆಗೆ ಬಂದೆ. ಗಲಾಟೆ ಸ್ಥಳದಲ್ಲಿ ನಾನು ಇರಲೇ ಇಲ್ಲ. ಸೋಮವಾರ ಆಸ್ಪತ್ರೆಗೆ ಹೋಗಿ ನಾಲ್ವರನ್ನೂ ಮಾತನಾಡಿಸಿಕೊಂಡು ಬಂದಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.