ದಾಬಸ್ಪೇಟೆ: ಕಂಬಾಳು ಗ್ರಾಮದ ರೈತ ಗಿರಿಯಪ್ಪ ಅವರು ತಮ್ಮ ಹೊಲದಲ್ಲಿ ರಾಗಿ ಬಿತ್ತನೆ ಮಾಡುವ ಮೂಲಕ ಮಿನಿ ಟ್ರ್ಯಾಕ್ಟರ್ ಚಾಲಿತ ಬಹು ಬೆಳೆ ಬಿತ್ತನೆ ಯಂತ್ರದ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಸೋಂಪುರ ರೈತ ಸಂಪರ್ಕ ಕೇಂದ್ರ ಮತ್ತು ವಿಎಸ್ಟಿ ಶಕ್ತಿ ಕಂಪೆನಿಯ ಆಶ್ರಯದಲ್ಲಿ ಈ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎಚ್.ಜಿ.ಅಶೋಕ್ ಮಾರ್ಗದರ್ಶನ ನೀಡಿದ್ದರು.
‘ಈ ಕೂರಿಗೆಯಿಂದ ಸಾಲುಗಳ ನಡುವೆ ಅಂತರ ಕಾಪಾಡಬಹುದು. ಬೀಜ ಬಿತ್ತನೆ ಹಾಗೂ ಗೊಬ್ಬರವನ್ನು ಏಕಕಾಲಕ್ಕೆ ಹಾಕಬಹುದು. ಕೂಲಿ–ಕಾರ್ಮಿಕರ ಕೊರತೆಯನ್ನು ಇದು ನೀಗಿಸುತ್ತದೆ. ರಾಗಿ, ಶೇಂಗಾ, ಮುಸುಕಿನ ಜೋಳವನ್ನು ಈ ಯಂತ್ರದ ಮೂಲಕ ಬಿತ್ತನೆ ಮಾಡಬಹುದು’ ಎಂದು ವಿಎಸ್ಟಿ ಶಕ್ತಿ ಕಂಪೆನಿಯ ಬಿ.ಸಿ.ಎಸ್.ಅಯ್ಯಂಗಾರ್ ವಿವರಿಸಿದರು.
‘ಒಂದು ಎಕರೆ ಪ್ರದೇಶವನ್ನು ಒಂದೂವರೆ ಗಂಟೆಯಲ್ಲಿ ಬಿತ್ತನೆ ಮಾಡಬಹುದು. ಇದು ಸುಧಾರಿತ ಬೇಸಾಯ ಹಾಗೂ ಎತ್ತಿನ ಸಂಯುಕ್ತ ಕೂರಿಗೆಗಿಂತಲೂ ಉತ್ತಮವಾಗಿದೆ’ ಎಂದರು.
‘ರೈತ ಸಂಪರ್ಕ ಕೇಂದ್ರದಲ್ಲಿನ ಕೃಷಿ ಯಂತ್ರಧಾರೆಯಲ್ಲಿ ಈ ಕೂರಿಗೆಯು ಬಾಡಿಗೆಗೆ ದೊರೆಯುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು’ ಎಂದು ಸೋಂಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಘೋರ್ಪಡೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.