ದಾಬಸ್ಪೇಟೆ: ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ನೆಲಮಂಗಲ ತಾಲ್ಲೂಕಿನ ದಾಸೇನಹಳ್ಳಿಯ ಗ್ರಾಮಸ್ಥರು ಧರಣಿ ನಡೆಸಿದರು.
ಗ್ರಾಮದಲ್ಲಿ ಸುಮಾರು 250 ಕುಟುಂಬಗಳು ವಾಸವಾಗಿದ್ದು, ಇದರಲ್ಲಿ 100ಕ್ಕೂ ಅಧಿಕ ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿವೆ. ಕುಡಿಯಲು ಹಾಗೂ ದಿನ ಬಳಕೆಗೆ ನೀರಿನ ಅಭಾವ ಉಂಟಾಗಿದೆ. ಇದರಿಂದ ನೂರಾರು ರೂಪಾಯಿ ನೀಡಿ ಟ್ಯಾಂಕರ್ ನೀರನ್ನು ಖರೀದಿಸಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮದ ಮಹಿಳೆಯರು ಅಳಲುತೋಡಿಕೊಂಡರು.
ಜಾನುವಾರುಗಳಿಗೂ ಕುಡಿಯುವ ನೀರಿಲ್ಲ. ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸಲು ರೈತರ ಕೊಳವೆ ಬಾವಿಗಳಿಂದ ನೀರು ತರುವಂತಾಗಿದೆ ಎಂದರು.
ಮರಳಕುಂಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಇದೇ ಗ್ರಾಮದವರು. ಆದರೆ, ನೀರಿನ ಬವಣೆಯನ್ನು ನೀಗಿಸಲು ಅವರು ಪ್ರಯತ್ನಿಸುತ್ತಿಲ್ಲ ಎಂದು ಗೃಹಿಣಿ ಸುನಂದಮ್ಮ ದೂರಿದರು.
ನೀರಿನ ಸಮಸ್ಯೆಯನ್ನು ಬಗೆಹರಿಸಲು ಮತ್ತೊಂದು ಕೊಳವೆ ಬಾವಿ ಕೊರೆಸಲಾಗುತ್ತದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಶಂಕರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.