ADVERTISEMENT

ಕೃಷಿ ಕೂಲಿಕಾರರ ಕಡೆಗಣನೆ: 27 ರಂದು ವಿಧಾನಸೌಧ ಚಲೋ ಚಳವಳಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:50 IST
Last Updated 25 ಫೆಬ್ರುವರಿ 2012, 19:50 IST

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿರುವ ಸರ್ಕಾರಗಳು ಕೃಷಿ ಕೂಲಿಕಾರರನ್ನು ಕಡೆಗಣಿಸಿದ್ದು, 2012-13ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ಕೂಲಿಕಾರರಿಗೆ ನ್ಯಾಯ ಸಮ್ಮತವಾದ  ಹಕ್ಕನ್ನು ನೀಡಬೇಕೆಂದು ಆಗ್ರಹಿಸಿ ಫೆ.27 ರಂದು ವಿಧಾನಸೌಧ ಚಲೋ ಚಳವಳಿಯನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ  ಕೃಷಿ ಕೂಲಿಕಾರರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಸಣ್ಣ ರೈತರು ಭೂಮಿ ಕಳೆದುಕೊಂಡು ಕೃಷಿ ಕೂಲಿಕಾರರಾಗುತ್ತಿದ್ದಾರೆ. ರೈತರು ಫಸಲಿಗೆ ಯೋಗ್ಯ ಬೆಲೆ ಸಿಗದಿರುವದರಿಂದ ಅನಿವಾರ್ಯವಾಗಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಭ್ರಷ್ಟಾಚಾರದ ವಿಷ ವರ್ತುಲದೊಳಗೆ ಸಿಕ್ಕಿದೆ. ಇದರಿಂದ ಕೂಲಿಕಾರರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ ಎಂದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ್ ಮಾತನಾಡಿ, ತಿಂಗಳುಗಟ್ಟಲೆ ಕೆಲಸ ಸಿಗದೆ ಬೇಸತ್ತು ಚಿತ್ತಾಪುರ ತಾಲೂಕಿನ ಕಾಳಗಿ ಗ್ರಾಮದ ಕೂಲಿಕಾರ ದೇವಿಂದ್ರಪ್ಪ ಮಾಳ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚಿಗೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ ಕೂಲಿಕಾರರಿಗೆ ಈ ಸಲದ ಬಜೆಟ್‌ನಲ್ಲಿ ನ್ಯಾಯಸಮ್ಮತ ಪಾಲನ್ನು ನೀಡಬೇಕೆಂದು ಆಗ್ರಹಿಸಲು ವಿಧಾನಸೌಧ ಚಲೋ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.