ADVERTISEMENT

ಕೃಷ್ಣ ಅವ್ಯವಹಾರ ಎಸಗಿಲ್ಲ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಮಂಜೂರಾಗಿರುವ ಹಣದಲ್ಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಚಿತ್ರನಟಿ ಬಿ. ಸರೋಜಾ ದೇವಿ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಾಯಿ ಪುಷ್ಪಾ ದ್ರಾವಿಡ್ ಅವರು ಯಾವುದೇ ರೀತಿಯಲ್ಲಿ ಅವ್ಯವಹಾರ ನಡೆಸಿಲ್ಲ ಎಂದು ಪರಿಷತ್‌ನ ಸ್ಥಾಪಕ ಕಾರ್ಯದರ್ಶಿ ಪ್ರೊ. ಎಂ.ಎಸ್ ನಂಜುಂಡ ರಾವ್ ಅವರ ಪುತ್ರಿ ಶ್ರೀದೇವಿರಾವ್ ಸ್ಪಷ್ಟಪಡಿಸಿದ್ದಾರೆ.

`ಸಿವಿಲ್ ಕೋರ್ಟ್‌ನಲ್ಲಿ ಇವರೆಲ್ಲರ ವಿರುದ್ಧ ನಾನು ಅರ್ಜಿ ಸಲ್ಲಿಸಿರುವುದು ನಿಜ. ಆದರೆ ಇವರೆಲ್ಲ ಪರಿಷತ್‌ಗೆ ಆಜೀವ ಸದಸ್ಯರಾಗಿರುವುದನ್ನು ಮಾತ್ರ ಅರ್ಜಿಯಲ್ಲಿ ಪ್ರಶ್ನಿಸಿದ್ದೇನೆ. ಆದರೆ ಪರಿಷತ್‌ನಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರಕ್ಕೂ, ಇವರಿಗೂ ಯಾವುದೇ ಸಂಬಂಧ ಇಲ್ಲ~ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2004ರಿಂದ 2006ರ ಅವಧಿ ಮತ್ತು 2007ರಿಂದ 2009ರ ಅವಧಿಯಲ್ಲಿ ಪರಿಷತ್ತಿನ ಆಡಳಿತ ನಿರ್ವಹಣೆ ಮಾಡುತ್ತಿದ್ದ ಕಾರ್ಯಕಾರಿ ಸಮಿತಿ ಸದಸ್ಯರು ಮಾತ್ರ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖಾ ವರದಿ ಹೇಳಿದೆ. ನ್ಯಾಯಾಲಯ ಕೂಡ ತನ್ನ ಆದೇಶದಲ್ಲಿ ಇದೇ ರೀತಿ ಹೇಳಿದೆ. ತಾವು ಸಲ್ಲಿಸಿದ ದೂರಿನಲ್ಲಿ ಎಸ್.ಎಂ.ಕೃಷ್ಣ, ಸರೋಜಾದೇವಿ, ರಾಹುಲ್ ದ್ರಾವಿಡ್ ಮತ್ತು ಪುಷ್ಪಾ ದ್ರಾವಿಡ್ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎಂದು ಅವರು ವಿವರಿಸಿದ್ದಾರೆ.

ಆದರೆ ಇವರೆಲ್ಲರೂ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ ಎಂಬುದಾಗಿ ಬುಧವಾರದ ಪತ್ರಿಕೆಯಲ್ಲಿ ತಪ್ಪಾಗಿ ಸುದ್ದಿ ಪ್ರಕಟವಾಗಿತ್ತು. ಅದಕ್ಕಾಗಿ ವಿಷಾದಿಸುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.