ADVERTISEMENT

ಕೆಂಪೇಗೌಡರ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಕೆಂಪೇಗೌಡರ ಪ್ರತಿಮೆ ಅನಾವರಣ
ಕೆಂಪೇಗೌಡರ ಪ್ರತಿಮೆ ಅನಾವರಣ   

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಬಳಿಯ ಉದ್ಯಾನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸಚಿವ ಕೆ.ಜೆ.ಜಾರ್ಜ್‌ ಸೋಮವಾರ ಅನಾವರಣಗೊಳಿಸಿದರು.

ತಾಮ್ರ ಮತ್ತು ಕಂಚಿನಿಂದ ನಿರ್ಮಿಸಿರುವ ಅಶ್ವಾರೋಹಿ ಭಂಗಿಯ ಈ ಪ್ರತಿಮೆ 2.75 ಟನ್‌ ತೂಕವಿದೆ. ಪ್ರತಿಮೆ ತಯಾರಿಸಲು ₹ 49.58 ಲಕ್ಷ ವೆಚ್ಚವಾಗಿದೆ. ಇದರ ನಿರ್ಮಾಣಕ್ಕೆ ಸುಮಾರು 2 ವರ್ಷ ತಗುಲಿದೆ.

ಕಲ್ಲಿನಿಂದ ನಿರ್ಮಿಸಿರುವ 8.53 ಮೀಎತ್ತರದ ಕಟ್ಟೆಯ ಮೇಲೆ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. 11.50 ಮೀ ಉದ್ದ ಹಾಗೂ 9.10 ಮೀ ಅಗಲದ ಈ ಕಟ್ಟೆಯು ಕೋಟೆಯ ಮಾದರಿಯಲ್ಲಿದೆ. ಇದರ ನಿರ್ಮಾಣಕ್ಕೆ ₹53 ಲಕ್ಷ ವೆಚ್ಚವಾಗಿದೆ.

ADVERTISEMENT

ಹೆಬ್ಬಾಳ ಬೆಂಗಳೂರಿನ ಹೆಬ್ಬಾಗಿಲು ಇದ್ದ ಹಾಗೆ. ನಗರಕ್ಕೆ ಬರುವವರಿಗೆ ಕೆಂಪೇಗೌಡರ ಈ ಸುಂದರ ಪ್ರತಿಮೆ ಸ್ವಾಗತ ಕೋರಲಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಅಪೂರ್ಣ ಕಾಮಗಾರಿ: ಇಲ್ಲಿನ ಉದ್ಯಾನವನ್ನು ಅಭಿವೃದ್ಧಿಪಡಿಸುವ ಮುನ್ನವೇ ಪ್ರತಿಮೆ ಅನಾವರಣಗೊಳಿಸಲಾಗಿದೆ. ಕಟ್ಟೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಡಿಎ ತರಾತುರಿಯಲ್ಲಿ ಇದರ ಲೋಕಾರ್ಪಣೆ ಗೊಳಿಸಿದೆ ಎಂದು ಕೆಂಪೇಗೌಡ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕೆಂಪೇಗೌಡ ಪ್ರತಿಮೆ ನಿರ್ಮಾಣ ಕಾರ್ಯ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಹಾಗಾಗಿ ಈ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದೇವೆ. ಇಲ್ಲಿ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಉದ್ಯಾನದ ಅಭಿವೃದ್ಧಿ ಮಾಡಲಾಗುವುದು ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಲ್‌.ರವೀಂದ್ರಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.