ಬೆಂಗಳೂರು: ಕರ್ನಾಟಕ ಲೋಕಸೇವಾ ಅಯೋಗದ(ಕೆಪಿಎಸ್ಸಿ) ಸದಸ್ಯರ ಕಾರು ಚಾಲಕನ ಗಮನ ಬೇರೆಡೆ ಸೆಳೆದು, ಅದರಲ್ಲಿದ್ದ ಬ್ರೀಫ್ಕೇಸ್ ಕಳವು ಮಾಡಿದ ಪ್ರಕರಣ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ನಡೆದಿದೆ.
ಬ್ರೀಫ್ಕೇಸ್, ಕೆಪಿಎಸ್ಸಿ ಸದಸ್ಯ ಡಾ. ಲಕ್ಷ್ಮಿನಾರಾಯಣ ಅವರದ್ದಾಗಿದ್ದು, ಲ್ಯಾಪ್ಟಾಪ್ ಮತ್ತು ₹49,000 ನಗದು ಇತ್ತು. ಯಾವುದೇ ದಾಖಲೆ ಪತ್ರಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 10.30ರ ಸುಮಾರಿಗೆ ಸಂಪಿಗೆ ರಸ್ತೆಗೆ ಬಂದಿದ್ದ ಲಕ್ಷ್ಮೀನಾರಾಯಣ, ಕಾರಿನಿಂದ ಇಳಿದು ಹೊರಗಡೆ ಹೋಗಿದ್ದರು. ಚಾಲಕ ಈರಪ್ಪ ಹೊಂಡಪ್ಪನವರ್ ಕಾರು ಪಾರ್ಕ್ ಮಾಡಿ ಮುಂಭಾಗದಲ್ಲಿ ನಿಂತಿದ್ದರು. ಆಗ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು ಕಾರಿನ ಇನ್ನೊಂದು ಬದಿಯಲ್ಲಿ ಹಣ ಬಿದ್ದಿರುವುದಾಗಿ ತಿಳಿಸಿದ್ದಾರೆ.
ಅವರ ಮಾತು ನಂಬಿದ ಈರಪ್ಪ, ಅತ್ತ ನೋಡಿದಾಗ ಮೂರು ಹತ್ತು ರೂಪಾಯಿ ನೋಟುಗಳನ್ನು ಬಿದ್ದಿದ್ದವು, ಅದನ್ನು ಆಯ್ದುಕೊಂಡು, ಬಳಿಕ ಲಕ್ಷ್ಮಿನಾರಾಯಣ ಅವರನ್ನು ಕರೆದುಕೊಂಡು 11.30ರ ಸುಮಾರಿಗೆ ಕೆಪಿಎಸ್ಸಿ ಕಚೇರಿಗೆ ಹೋಗಿದ್ದಾರೆ. ಅಲ್ಲಿ ನೋಡಿದಾಗ ಬ್ರೀಫ್ಕೇಸ್ ಕಳವಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಯುತ್ತಿದೆ ಎಂದು ಮಲ್ಲೇಶ್ವರ ಠಾಣೆಯ ಪಿಎಸ್ಐ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.