
ಬೆಂಗಳೂರು: `ಖಾಸಗಿ ಕ್ಷೇತ್ರಗಳಲ್ಲಿಯೂ ಮೀಸಲಾತಿ ನೀಡಬೇಕು~ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು.ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಸಮಾನ ಮನಸ್ಕ ನೌಕರರ ವೇದಿಕೆ ಹಾಗೂ ವಿವಿಧ ಇಲಾಖೆಗಳ ಎಸ್ಸಿ ಮತ್ತು ಎಸ್ಟಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಯವನಿಕ ಸಭಾಂಗಣದಲ್ಲಿ ಗುರುವಾರ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಈಗ ಎಲ್ಲ ಉದ್ಯಮಗಳು ಖಾಸಗೀಕರಣವಾಗುತ್ತಿವೆ. ಇದರಿಂದ ಸರ್ಕಾರಿ ನೌಕರಿಗಳು ಸಿಗುವುದು ದುಸ್ತರವಾಗುತ್ತಿದೆ. ಆದ್ದರಿಂದ ಖಾಸಗಿ ಕ್ಷೇತ್ರದಲ್ಲೂ ದಲಿತರಿಗೆ ಮೀಸಲಾತಿಯನ್ನು ನೀಡಬೇಕು. ಏಕೆಂದರೆ, ಶೋಷಿತ ವರ್ಗ ಇನ್ನು ಎಷ್ಟು ದಿನಗಳ ಕಾಲ ಶೋಷಣೆಯನ್ನು ಅನುಭವಿಸಬೇಕು~ ಎಂದರು.
`ಐಟಿ ಮತ್ತು ಬಿಟಿಯ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರು ನಗರದಲ್ಲಿಯೂ ಕೂಡ ದಲಿತ ಸರ್ಕಾರಿ ನೌಕರನಿಗೆ ಬಾಡಿಗೆ ಮನೆ ಸಿಗದ ಸ್ಥಿತಿ ಇದೆ. ಶೋಷಣೆಯ ರೂಪಗಳು ಬದಲಾಗಿವೆಯೇ ಹೊರತು ಶೋಷಣೆಯು ನಿಂತಿಲ್ಲ~ ಎಂದು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯೆ ಮೋಟಮ್ಮ ಮಾತನಾಡಿ, `ದಲಿತರೆಲ್ಲ ಒಗ್ಗಟ್ಟಾಗಬೇಕು. ಏನಾದರೂ ಸಮಸ್ಯೆಗಳಾದರೆ, ಒಟ್ಟಾಗಿ ಹೋರಾಡಬೇಕು~ ಎಂದು ಕರೆ ನೀಡಿದರು.`ಮರ್ಯಾದಾ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿವೆ. ದಲಿತರು ಯಾರೂ ಮೇಲ್ವರ್ಗದವರನ್ನು ಪ್ರೀತಿಸಲೇಬಾರದು ಎಂಬ ನೀತಿಯು ಸಮಾಜದಲ್ಲಿ ದಟ್ಟವಾಗಿದೆ. ಇಂತಹ ಘಟನೆಗಳು ನಡೆದಾಗ ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು~ ಎಂದರು.
`ಚನ್ನಪಟ್ಟಣದ ಚಕ್ಕೆರೆ ಊರಿನಲ್ಲಿ ಮೇಲ್ವರ್ಗದ ಜನರು ದಲಿತರಿಗೆ ಹಾಲು ಒಕ್ಕೂಟದ ಸದಸ್ಯರಾಗಲು ಅಡ್ಡಗಾಲು ಹಾಕುತ್ತಿದ್ದಾರೆ ಅವರಿಗೆ ಸಮಾನ ಹಕ್ಕುಗಳು ಸಿಗಬಾರದೆಂದು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಇದು ಶೋಷಿತ ವರ್ಗ ಉದ್ಧಾರವಾಗಬಾರದೆಂಬ ನೀತಿಯಾಗಿದೆ~ ಎಂದು ಹೇಳಿದರು.
`ಇನ್ನು ಆರು ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಯಾವ ಪಕ್ಷದಲ್ಲಿ ದಲಿತ ಮುಖಂಡರಿದ್ದಾರೆ ಎಂಬುದನ್ನು ಯೋಚಿಸಿ, ಅವರಿಗೆ ಮತ ನೀಡಿ, ಲಕ್ ಇದ್ದರೆ ಕ್ಲಿಕ್ ಆಗ್ತಾರೆ, ಇಲ್ಲವಾದರೆ ಇಲ್ಲ~ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಂತೇಜಿ ಬುದ್ಧ ಪ್ರಕಾಶ್, ಶಾಸಕ ದಿನೇಶ್ ಗುಂಡೂರಾವ್, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಾನಂದೂರು ಕೆಂಪಯ್ಯ, ನಿರ್ಮಾಪಕ ಮದನ್ ಪಟೇಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.