ಬೆಂಗಳೂರು: ವಸತಿ ಹಾಗೂ ನಿವೇಶನದ ಹಕ್ಕನ್ನು ಒಳಗೊಂಡ ಸಮಗ್ರ ಕೊಳೆಗೇರಿಗಳ ಅಭಿವೃದ್ಧಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ‘ಸ್ಲಂ ಜನರ ಸಂಘಟನೆ’ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಇದೇ 16ರಂದು ಬೆಳಿಗ್ಗೆ 11ಕ್ಕೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ್ಯಾಲಿ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ.
ಕೊಳೆಗೇರಿ ಅಭಿವೃದ್ಧಿ ಕುರಿತ ಕರಡನ್ನು ರಾಜ್ಯ ಸರ್ಕಾರವು ರೂಪಿಸಿದೆ. ಅದನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಸಂಘಟನೆಯ ಸದಸ್ಯೆ ಮಲರ್ ಒತ್ತಾಯಿಸಿದರು.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಮನೆ ಕಟ್ಟಿಕೊಡಲು ಸೀಮಿತವಾಗಿದೆ. ಆದರೆ, ನಿವಾಸಿಗಳು ಘನತೆಯಿಂದ ಜೀವನ ನಡೆಸಲು ಹಾಗೂ ಸಾಮಾಜಿಕ ನ್ಯಾಯದ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ. ವಸತಿ, ಆರೋಗ್ಯ, ಭೂಮಿ ಹಕ್ಕು ಹಾಗೂ ಮಕ್ಕಳಿಗೆ ಶಾಲೆ, ಆಟದ ಮೈದಾನ ಒದಗಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.
ಆ್ಯಕ್ಷನ್ ಫಾರ್ ಸೋಷಿಯಲ್ ಜಸ್ಟೀಸ್ನ ಸದಸ್ಯ ಶಿವಪ್ರಸನ್ನ, ‘ರಾಜ್ಯದ ಎಲ್ಲ ಕೊಳೆಗೇರಿ ನಿವಾಸಿಗಳಿಗೆ ನೀಡಿರುವ ನಿವೇಶನಕ್ಕೆ ಕ್ರಯಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.