ADVERTISEMENT

ಕೌಟುಂಬಿಕ ಕಲಹ: ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:32 IST
Last Updated 25 ಡಿಸೆಂಬರ್ 2012, 19:32 IST

ರಾಮನಗರ: ತಾಲ್ಲೂಕಿನ ಅಕ್ಕೂರು ಗ್ರಾಮದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಮೃತ ಮಹಿಳೆಯನ್ನು ಜ್ಯೋತಿ (24) ಎಂದು ಗುರುತಿಸಲಾಗಿದೆ. ಕೌಟುಂಬಿಕ ಜಗಳದಿಂದ ಮನನೊಂದು ಜ್ಯೋತಿ ವಿಷ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ಕೂರಿನ ನಿಂಗರಾಜು ಎಂಬುವರೊಂದಿಗೆ ಆರೂ ವರ್ಷದ ಹಿಂದೆ ಜ್ಯೋತಿ ಅವರ ವಿವಾಹ ಆಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಐದಾರು ತಿಂಗಳಿಂದ ನಿಂಗರಾಜು ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಜ್ಯೋತಿ ನಾಲ್ಕು ತಿಂಗಳಿಂದ ತವರು ಮನೆಯಲ್ಲಿಯೇ ನೆಲೆಸಿದ್ದರು. ನಂತರ ಹಿರಿಯರು ರಾಜೀ ಪಂಚಾಯಿತಿ ಮಾಡಿ ಜ್ಯೋತಿಯನ್ನು ಪುನಃ ಪತಿಯ ಮನೆಗೆ ಐದು-ಆರು ದಿನದ ಹಿಂದೆ ಕಳುಹಿಸಿ ಕೊಟ್ಟಿದ್ದರು.

ನಿತ್ಯ ನಡೆಯುತ್ತಿದ್ದ ಈ ಜಗಳದಿಂದ ಮನನೊಂದ ಜ್ಯೋತಿ ವಿಷ ಕುಡಿದಿದ್ದಾರೆ. ಅವರನ್ನು ರಾಮನಗರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜ್ಯೋತಿ ಅವರ ತಂದೆ ಗೊಲ್ಲರಹಟ್ಟಿಯ ಉಮೇಶ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿವಾಹವಾಗಿ ಏಳು ವರ್ಷ ಪೂರ್ಣ ಗೊಂಡಿಲ್ಲವಾದ್ದರಿಂದ ಇದು ವರದಕ್ಷಿಣೆ ಕಿರುಕುಳ ಪ್ರಕರಣವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.