ADVERTISEMENT

ಗಾಂಧಿನಗರ: ಒಂದು ನಾಮಪತ್ರ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: ಗಾಂಧಿನಗರ ವಾರ್ಡ್ ಉಪ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 15 ಮಂದಿ ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿಯೊಬ್ಬರ ನಾಮಪತ್ರ ತಿರಸ್ಕೃತವಾಗಿದ್ದು, ಉಳಿದ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಫರೂಕ್ ಪಾಶ ಅಫಿಡವಿಟ್‌ನಲ್ಲಿ ಸಹಿ ಹಾಕದೇ ಇರುವುದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಗಾಂಧಿನಗರ ವಾರ್ಡ್‌ನ ಉಪ ಚುನಾವಣೆಯ ಚುನಾವಣಾಧಿಕಾರಿ ಎಲ್. ನಾಗರಾಜ್ ತಿಳಿಸಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳಲು 18ರಂದು ಕೊನೇ ದಿನ.

ಅಂದು ಮಧ್ಯಾಹ್ನ 3 ಗಂಟೆಯೊಳಗೆ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಬಹುದು. ಅಂದು ಮಧ್ಯಾಹ್ನ 3.30ಕ್ಕೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ.

ವಿಶೇಷ ಭೂಸ್ವಾಧೀನ ಅಧಿಕಾರಿ ನಾಡಿಗೇರ್

ಬೆಂಗಳೂರು: ಕೆಎಎಸ್ ಅಧಿಕಾರಿ ಆರ್.ಜೆ.ನಾಡಿಗೇರ್ ಅವರನ್ನು ನಗರದಲ್ಲಿ ಖಾಲಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿ (ರಾಷ್ಟ್ರೀಯ ಹೆದ್ದಾರಿಗಳು) ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇಂದಿನಿಂದ ಕ್ಷಯ ರೋಗ ಸಪ್ತಾಹ
ಬೆಂಗಳೂರು:
ಕ್ಷಯರೋಗ ನಿಯಂತ್ರಣ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಇದೇ ಶುಕ್ರವಾರದಿಂದ ಬರುವ ಗುರುವಾರದವರೆಗೆ (ಫೆ. 23) ರಾಜ್ಯದಾದ್ಯಂತ ಕ್ಷಯರೋಗ ಸಪ್ತಾಹ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಇದರ ಅಂಗವಾಗಿ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಹಾಗೂ ಲೇಡಿ ವೆಲ್ಲಿಂಗ್‌ಟನ್ ರಾಜ್ಯ ಕ್ಷಯರೋಗ ಕೇಂದ್ರವೂ ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ `ಡಾಟ್ಸ್~ ಚಿಕಿತ್ಸೆ ಉಚಿತವಾಗಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

`ಕ್ಷಯರೋಗ ಸಪ್ತಾಹ ಆಚರಣೆ~ ಕುರಿತು ಗೃಹ ಕಚೇರಿ `ಕೃಷ್ಣಾ~ದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, `ಮಲ್ಟಿ ಡ್ರಗ್ ರೆಸಿಸ್ಟೆಂಟ್ ಕ್ಷಯ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದರ ನಿವಾರಣೆಗೆ ಕನಿಷ್ಠ ಎರಡು ವರ್ಷಗಳ ಚಿಕಿತ್ಸೆ ಅಗತ್ಯವಿದೆ.
 
ಚಿಕಿತ್ಸೆಗೆ ಬೇಕಿರುವ ಹಣದಲ್ಲಿ ಎರಡು ಲಕ್ಷ ರೂಪಾಯಿಯನ್ನು ಸರ್ಕಾರವೇ ಭರಿಸುತ್ತಿದೆ~ ಎಂದು ತಿಳಿಸಿದರು. ಕ್ಷಯರೋಗ ಸಪ್ತಾಹದಲ್ಲಿ ಸರ್ಕಾರಿ ವೈದ್ಯರ ಜೊತೆಗೆ, ಎಲ್ಲ ಖಾಸಗಿ ವೈದ್ಯರೂ ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, `ಜಿಲ್ಲಾ ಕ್ಷಯರೋಗ ಕೇಂದ್ರಗಳು ಮತ್ತು ಘಟಕಗಳ ಮೂಲಕ ಈ ಪಿಡುಗಿನ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.