ಬೆಂಗಳೂರು: ‘ಗುಜರಾತ್ನಲ್ಲಿ ನೆಲೆಸಿರುವ ಉತ್ತರ ಪ್ರದೇಶ, ಬಿಹಾರದ ಜನರನ್ನು ಬೆದರಿಸಿ ಕಳುಹಿಸುವ ಘಟನೆಗಳ ಹಿಂದೆ ರಾಜಕೀಯ ಷಡ್ಯಂತ್ರ ನಡೆದಿದೆ’ ಎಂದುಇಂಧನ ಸಚಿವ ಸೌರಭ್ ಭಾಯಿ ಪಟೇಲ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘50 ವರ್ಷಗಳಿಂದ ನೆಮ್ಮದಿಯಾಗಿದ್ದವರನ್ನು ಏಕಾಏಕಿ ಏನೇನೋ ವದಂತಿ ಹಬ್ಬಿಸಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ.ದಸರಾ, ದುರ್ಗಾಪೂಜೆ ಸಂದರ್ಭದಲ್ಲಿ ಜನ ತಮ್ಮ ಊರುಗಳಿಗೆ ವಾಪಸ್ ಹೋಗುವುದು ಸಾಮಾನ್ಯ. ಈ ಪ್ರಮಾಣ ಶೇ 1ರಷ್ಟು ಇರಬಹುದು ಅಷ್ಟೆ. ಹೋದವರು ಮತ್ತೆ ವಾಪಸಾಗಲಿದ್ದಾರೆ’ ಎಂದರು.
ಪಟೇಲ್ ಸಮುದಾಯದ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ಚುನಾವಣೆ ಸಂದರ್ಭದಲ್ಲಿ ಇಂತಹ ಪ್ರತಿಭಟನೆಗಳು ಬರುತ್ತವೆ, ಹೋಗುತ್ತವೆ. ಕೊನೆಗೆ ತಣ್ಣಗಾಗುತ್ತವೆ’ ಎಂದರು.
‘ನರ್ಮದಾ ನದಿ ಸಮೀಪ ನಿರ್ಮಿಸಲಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದ್ದೇನೆ. ಮೂರ್ತಿ ನಿರ್ಮಾಣಕ್ಕೆ ದೇಶದ ಎಲ್ಲ ಭಾಗಗಳಿಂದಲೂ ಜನತೆ ಸಹಕಾರ ನೀಡಿದ್ದಾರೆ’ ಎಂದರು.
‘ಮೂರ್ತಿ ನಿರ್ಮಿಸಲಾದ ಪ್ರದೇಶದಲ್ಲಿ ಎಲ್ಲ ರಾಜ್ಯಗಳಿಂದಲೂ ಭವನಗಳನ್ನು ನಿರ್ಮಾಣ ಮಾಡಿಕೊಳ್ಳಲು ನಿವೇಶನ ಮೀಸಲಿಡಲಾಗಿದೆ. ಕರ್ನಾಟಕದಿಂದಲೂ ಭವನ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳ ತಂಡವನ್ನು ಕಳುಹಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.