ADVERTISEMENT

ಗುಳಿಗೆ ಬದಲು ಜೀವಾಣು ಅಭಿವೃದ್ಧಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಬೆಂಗಳೂರು: ರೋಗನಿರೋಧಕ ಗುಳಿಗೆಗಳಿಗೆ ಉತ್ತೇಜನ ನೀಡದೇ ಮನುಷ್ಯನ ದೇಹದಲ್ಲಿ ಪ್ರಕೃತಿದತ್ತವಾಗಿರುವ ರೋಗನಿರೋಧಕ ಜೀವಾಣುಗಳ ಅಭಿವೃದ್ಧಿಗೆ ಪ್ರೇರೇಪಿಸುವಂತೆ ಆ್ಯಂಟಿಬಯೋಟಿಕ್ ಸ್ಟೀವಾರ್ಡ್‌ಶಿಪ್ ನೆಟ್‌ವರ್ಕ್ ಇನ್ ಇಂಡಿಯಾ ಸಂಸ್ಥೆಯು `ಪ್ರತಿ ಜೀವಾಣುಗಳಿಗೆ ಪ್ರತಿರೋಧ; ಇಂದು ಎಚ್ಚರಿಕೆ, ಇಲ್ಲದಿದ್ದರೆ ನಾಳೆ ಮದ್ದು ಇಲ್ಲ' ಅಭಿಯಾನ ಹಮ್ಮಿಕೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದಿಷ್ಟ ಸೂಚನೆಯನ್ನು ಪಾಲಿಸುತ್ತಿರುವ ಈ ಸಂಸ್ಥೆಯು ಎನ್‌ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಸಹಯೋಗದಲ್ಲಿ ನಗರದಲ್ಲಿ ಗುರುವಾರ ವಿಚಾರಸಂಕಿರಣ ಹಮ್ಮಿಕೊಂಡಿತ್ತು.

ಉಜ್ಜಯನಿಯ ಆರ್‌ಡಿ ಗಾರ್ಡಿ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆಶಿಷ್ ಪಾಠಕ್ ಮಾತನಾಡಿ, `ಸಣ್ಣಪುಟ್ಟ ಸೋಂಕಿಗೂ ರೋಗನಿರೋಧಕ ಗುಳಿಗೆಗಳನ್ನು ಸೇವಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ನೈಸರ್ಗಿಕವಾಗಿ ಪಡೆದಿರುವ ರೋಗನಿರೋಧಕ ಜೀವಾಣುಗಳ ಶಕ್ತಿಯು ಕಳೆಗುಂದುತ್ತಿದ್ದು, ಈ ಸೇವನೆಯೇ ಚಟವಾಗುವ ಸಾಧ್ಯತೆಯಿದೆ. ಹಾಗಾಗಿ ವೈದ್ಯ ಸಮೂಹ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಸಂಸ್ಥೆಯ ಉದ್ದೇಶವಾಗಿದೆ' ಎಂದು ತಿಳಿಸಿದರು.

`ಸಾಮಾನ್ಯವಾಗಿ ಮನುಷ್ಯರಿಗೆ ಯಾವುದೇ ಸೋಂಕು ತಗುಲಿದಾಗ ಅದಕ್ಕೆ ಬ್ಯಾಕ್ಟೀರಿಯಾ ಅಥವಾ ವೈರಸ್ ಎರಡರಲ್ಲಿ ಯಾವುದು ಕಾರಣ ಎಂಬುದನ್ನು ಸರಿಯಾಗಿ ಪರೀಕ್ಷಿಸುತ್ತಿಲ್ಲ. ಎಲ್ಲದಕ್ಕೂ ರೋಗನಿರೋಧಕ ಗುಳಿಗೆಗಳನ್ನು ನೀಡಲಾಗುತ್ತದೆ. ರೋಗನಿರೋಧಕ ಗುಳಿಗೆಗಳಿಂದ ಬ್ಯಾಕ್ಟೀರಿಯಾ ಸಂಬಂಧಿ ಕಾಯಿಲೆಗಳು ಗುಣವಾಗಬಹುದು ಆದರೆ ವೈರಸ್ ಸಂಬಂಧಿ ಕಾಯಿಲೆಗಳು ಗುಣವಾಗುವುದಿಲ್ಲ' ಎಂದು ಹೇಳಿದರು.

`ಆಸ್ಪತ್ರೆಗಳು ಮತ್ತು ಕೈಗಾರಿಕೆಗಳು ಉತ್ಪತ್ತಿ ಮಾಡುವ ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ನೀರಿಗೆ ಬಿಡುವುದು, ಶೌಚಾಲಯದ ನೀರು ಮುಂತಾದವುಗಳಿಂದ ಪರಿಸರ ಮಲಿನಗೊಳ್ಳುತ್ತಿದೆ. ಇದು ವೈರಾಣುಗಳು ಹೆಚ್ಚಿ ಕಾಯಿಲೆಗಳು ಹರಡಲು ಕಾರಣವಾಗುತ್ತಿದೆ.

ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುವಂತಹ ಸಂಸ್ಥೆಗಳು ಕಡ್ಡಾಯವಾಗಿ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವುದರಿಂದ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ' ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.