ಬೆಂಗಳೂರು: ವಾಹನ ಚಾಲನೆ ಕಲಿಸುವ ಸೋಗಿನಲ್ಲಿ ಸ್ನೇಹಿತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಿನ್ನಾಭರಣ ದೋಚಿದ್ದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿರುವ ಕೆಂಗೇರಿ ಪೊಲೀಸರು ₨ 2.50 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಉಪನಗರ ಬಳಿಯ ನಂದನ ಗಾರ್ಡನ್ನ ಪ್ರತಿಮಾ (36), ಗಂಗಾಧರ (20) ಮತ್ತು ಅಮಾನುಲ್ಲಾ (19) ಬಂಧಿತರು.
ಕೇಬಲ್ ಕೆಲಸ ಮಾಡುತ್ತಿದ್ದ ಗಂಗಾಧರ, ಪ್ರತಿಮಾ ಅವರಿಗೆ ಪರಿಚಿತನಾಗಿದ್ದ. ಅವರಿಬ್ಬರಿಗೂ ತುರ್ತಾಗಿ ಹಣದ ಅಗತ್ಯವಿದ್ದರಿಂದ ಶೀಲಾ ಎಂಬುವರ ಆಭರಣ ಗಳನ್ನು ದೋಚಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪ್ರತಿಮಾ, ಸ್ನೇಹಿತೆ ಶೀಲಾ ಅವರಿಗೆ 2014ರ ಜೂ.25ರಂದು ದ್ವಿಚಕ್ರ ವಾಹನ ಚಾಲನೆ ಕಲಿಸುವುದಾಗಿ ನಂಬಿಸಿ ಕುಂಬಳಗೋಡು ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಪೂರ್ವಯೋಜಿತ ಸಂಚಿನಂತೆ ಸ್ವಲ್ಪ ಸಮಯದಲ್ಲೇ ಅಲ್ಲಿಗೆ ಬಂದ ಗಂಗಾಧರ ಹಾಗೂ ಆತನ ಸಹಚರರು ಶೀಲಾ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಎರಡು ಚಿನ್ನದ ಸರಗಳನ್ನು ದೋಚಿದ್ದರು. ಅಲ್ಲದೇ, ಶೀಲಾ ಅವರಿಗೆ ಅನುಮಾನ ಬರಬಾರದೆಂಬ ಕಾರಣಕ್ಕೆ ಪ್ರತಿಮಾ ಅವರ ಕತ್ತಿನಲ್ಲಿದ್ದ ನಕಲಿ ಸರವನ್ನೂ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪತಿಗೂ ಸುಳ್ಳು: ಘಟನೆ ಬಳಿಕ ಪ್ರತಿಮಾ, ಶೀಲಾ ಅವರ ಜತೆಯೇ ಕುಂಬಳಗೋಡು ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಅಲ್ಲದೇ, ದರೋಡೆಕೋರರು ಸರ ಕಿತ್ತುಕೊಂಡು ಹೋಗಿದ್ದಾಗಿ ಪತಿಗೂ ಸುಳ್ಳು ಹೇಳಿದ್ದರು. ಆದರೆ, ಘಟನಾ ದಿನ ಅವರು ಅಸಲಿ ಚಿನ್ನದ ಸರವನ್ನು ಮನೆಯಲ್ಲೇ ಬಿಚ್ಚಿಟ್ಟು ನಕಲಿ ಸರ ಹಾಕಿಕೊಂಡು ಹೋಗಿದ್ದರು. ಈ ಸಂಗತಿ ಪ್ರತಿಮಾ ಅವರನ್ನು ಬಂಧಿಸಿದ ನಂತರವಷ್ಟೇ ಅವರ ಪತಿಗೆ ಗೊತ್ತಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರು ಶೀಲಾ ಅವರ ಸರಗಳನ್ನು ಗಿರವಿ ಇಟ್ಟು, ಅದರಿಂದ ಬಂದ ಹಣವನ್ನು ಹಂಚಿಕೊಂಡಿದ್ದರು. ಪ್ರಕರಣದ ಇತರೆ ಆರೋಪಿಗಳಾದ ಎಸ್.ಮಂಜುನಾಥ, ಕಿರಣ್ ಮತ್ತು ಮಂಜುನಾಥ್ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.