ADVERTISEMENT

ಗೇರುಸೊಪ್ಪ: ಅನಧಿಕೃತ ಗೂಡಂಗಡಿ ತೆರವು

​ಪ್ರಜಾವಾಣಿ ವಾರ್ತೆ
Published 14 ಮೇ 2014, 20:01 IST
Last Updated 14 ಮೇ 2014, 20:01 IST
ಗೇರುಸೊಪ್ಪ ಅರಣ್ಯ ಪ್ರದೇಶದ ಶರಾವತಿ ಕೊಳ್ಳದ ವೀಕ್ಷಣಾ ಗೋಪುರದ ಬಳಿ ಇದ್ದ ಅನಧಿಕೃತ ಗೂಡಂಗಡಿ
ಗೇರುಸೊಪ್ಪ ಅರಣ್ಯ ಪ್ರದೇಶದ ಶರಾವತಿ ಕೊಳ್ಳದ ವೀಕ್ಷಣಾ ಗೋಪುರದ ಬಳಿ ಇದ್ದ ಅನಧಿಕೃತ ಗೂಡಂಗಡಿ   

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ  ಗೇರುಸೊಪ್ಪದ ಶರಾವತಿ ಕೊಳ್ಳ ವೀಕ್ಷಣಾ ಗೋಪುರದ ಬಳಿ ಇದ್ದ ಅನಧಿಕೃತ ಗೂಡಂಗಡಿಯನ್ನು  ಪರಿಸರ­ವಾದಿಯೊಬ್ಬರ ಹೋರಾಟದ ಹಿನ್ನೆಲೆ­ಯಲ್ಲಿ ಜಿಲ್ಲಾಡಳಿತ ತೆರವುಗೊಳಿಸಿದೆ.

ಈ ಅರಣ್ಯ ಪ್ರದೇಶವು ಸಿಂಗಳಿಕ­ದಂತಹ ಅತಿ ವಿರಳ ಜೀವಸಂಕುಲಗಳಿಗೆ ಆಶ್ರಯ ತಾಣ. ಅನಧಿಕೃತ ಗೂಡಂಗಡಿ­ಯಿಂದಾಗಿ ಆಹಾರಗಳನ್ನು ಅರಸಿ ಬರು­ತ್ತಿದ್ದ ಮಂಗಗಳ ಸಂತತಿ ಇತ್ತೀಚಿನ ದಿನ­ಗಳಲ್ಲಿ ಹೆಚ್ಚಿತ್ತು. ಇದರಿಂದ ಸಿಂಗಳಿಕಗಳ ಇರುವಿಕೆಗೆ ಅಡ್ಡಿ ಆಗಿತ್ತು. ಈ ಬಗ್ಗೆ ನಿಮ್ಹಾನ್ಸ್‌ ಸಂಶೋಧನಾ ಅಭ್ಯರ್ಥಿ ರವಿ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲಾಡ­ಳಿತಕ್ಕೆ ಲಿಖಿತ ದೂರು ಸಲ್ಲಿಸಿದ್ದರು.

‘ಗೂಡಂಗಡಿಯಿಂದಾಗಿ ಅರಣ್ಯ ಪ್ರದೇಶ­ದಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚಿದೆ. ಇದರಿಂದಾಗಿ ರೇಬಿಸ್‌ನಂತಹ ರೋಗ ವನ್ಯಜೀವಿಗಳಿಗೆ ಹರಡುವ ಸಾಧ್ಯತೆ ಇದೆ’ ಎಂದು ಉಲ್ಲೇಖಿಸಿದ್ದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಡಳಿತ ಅತಿಕ್ರಮಣ ತೆರವುಗೊ­ಳಿಸಲು ಹೊನ್ನಾವರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ಅವ­ರಿಗೆ ನಿರ್ದೇಶನ ನೀಡಿತ್ತು. 

ಬಳಿಕ ಗೂಡಂಗಡಿ ತೆರವುಗೊಳಿಸ­ಲಾಗಿತ್ತು. ಅದೇ ಸ್ಥಳದಲ್ಲಿ ಗೂಡಂಗಡಿ ಮತ್ತೆ ತಲೆ ಎತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೆಗಡೆ ಅವರು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿನಯ್‌ ಲೂತ್ರ ಅವರಿಗೆ ದೂರು ಸಲ್ಲಿಸಿದ್ದರು. ಲೂತ್ರ ಅವರ ಆದೇಶದಂತೆ ಇದೀಗ ಗೂಡಂಗಡಿ ಮತ್ತೆ ತೆರವುಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.