ADVERTISEMENT

ಗೋರಕ್ಷಣೆ ಪರ್ಯಾಯ ರಾಜಕಾರಣವಲ್ಲ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:35 IST
Last Updated 9 ಜುಲೈ 2017, 19:35 IST
ಗೋರಕ್ಷಣೆ ಪರ್ಯಾಯ ರಾಜಕಾರಣವಲ್ಲ
ಗೋರಕ್ಷಣೆ ಪರ್ಯಾಯ ರಾಜಕಾರಣವಲ್ಲ   

ಬೆಂಗಳೂರು: ‘ಗೋವನ್ನು ಕತ್ತರಿಸುವ ಕತ್ತಿಗೆ ಲೇಖನಿಯಿಂದ ಉತ್ತರ ನೀಡುವ, ರಕ್ತಕ್ಕೆ ಶಾಯಿಯಿಂದ ಉತ್ತರ ಕೊಡುವ ಅಭಿಯಾನವೇ ಅಭಯಾಕ್ಷರ ಆಂದೋಲನ. ಇದಕ್ಕೆ ಅಭಯ ಚಾತುರ್ಮಾಸ ಮೀಸಲು’ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಗೋವುಗಳ ರಕ್ಷಣೆ ಉದ್ದೇಶದಿಂದ 24ನೇ ಚಾತುರ್ಮಾಸವನ್ನು ‘ಅಭಯ ಚಾತುರ್ಮಾಸ್ಯ’ ಹೆಸರಿನಲ್ಲಿ ಗಿರಿನಗರದ ಶಾಖಾ ಮಠದಲ್ಲಿ ಭಾನುವಾರ ಆರಂಭಿಸಿದ ಅವರು ಮೊದಲ ದಿನದ ಧರ್ಮ ಸಭೆಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
‘ಮಠ ಎಂದರೆ ಸರ್ಕಾರಕ್ಕೆ, ರಾಜಕಾರಣಕ್ಕೆ ಪರ್ಯಾಯ. ನಮ್ಮ ದೇಶ, ಸಂಸ್ಕೃತಿಗೆ ಬೇಕಾದ್ದನ್ನು ಮಾಡುವುದು ನಮ್ಮ ಧ್ಯೇಯ. ನಿಮ್ಮ ಧ್ವನಿಗೆ ಇಲ್ಲಿ ಬೆಲೆ ಇದೆ. ರಾಜಕಾರಣಿಗಳಲ್ಲಿ ಭಿಕ್ಷೆ ಬೇಡುವ ಬದಲು, ಶ್ರೀಮಠಕ್ಕೆ ಬನ್ನಿ. ರಕ್ಷಿಸುವ ಹೊಣೆ ನಮ್ಮದು. ಮಹದೇಶ್ವರ ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿದ್ದ ಗೋವುಗಳಿಗೆ ಮೇವು ವಿತರಿಸಿದ್ದು ಶ್ರೀಮಠದ ಹೆಗ್ಗಳಿಕೆಯಲ್ಲ. ಸಮಾಜದ ಹೆಗ್ಗಳಿಕೆ’ ಎಂದು ಬಣ್ಣಿಸಿದರು.

‘ಇದು ದೇಶದ ಚರಿತ್ರೆಯನ್ನೇ ಬದಲಿಸಬಲ್ಲ ಮಹತ್ಕಾರ್ಯಕ್ಕೆ ನಾಂದಿ. ಗೋ ತತ್ವಕ್ಕಾಗಿ ಗುರುತತ್ವ ಆಚರಿಸುವ ಮಹಾವ್ರತ ಇದು. ಮಠದ ಶಿಷ್ಯಕೋಟಿ ಹಾಗೂ ಭಕ್ತರು ಬೆಂಗಳೂರಿನ ಪ್ರತಿ ಮನೆಯನ್ನು ತಲುಪಿ ಗೋವಿಗೆ ಅಭಯ ನೀಡುವ ಹಸ್ತಾಕ್ಷರ ಸಂಗ್ರಹಿಸಲಿದ್ದಾರೆ’ ಎಂದು ಬಣ್ಣಿಸಿದರು.
‘ಕಳೆದ ಅರ್ಧ ಶತಮಾನದಲ್ಲಿ ಗೋವಿನ ಜೀವ ಉಳಿಸಲು ಜನರು ರಾಜಕಾರಣಿಗಳ ಬಳಿ ಭಿಕ್ಷೆ ಬೇಡಿದ್ದಾರೆ. ಆದರೆ, ಗೋಹತ್ಯೆ ತಡೆಯುವಲ್ಲಿ ರಾಜಕಾರಣಿಗಳು ವಿಫಲರಾಗಿದ್ದಾರೆ.  ಈಗ ಗೋವಿಗೆ ಅಭಯ ನೀಡುವ ಹಸ್ತಾಕ್ಷರ ಪಡೆಯಲು ಮನೆಮನೆಗೆ ಹೋಗಿ ಜನರ ಬಳಿ ಭಿಕ್ಷೆ ಬೇಡೋಣ. ಇದು ಸಾವಿರ ವರ್ಷಗಳಿಂದ ದೇಶಕ್ಕೆ ಯಾರೂ ನೀಡದ ಮಹತ್ವದ ಕೊಡುಗೆಯಾಗಬಲ್ಲದು’ ಎಂದರು.

ADVERTISEMENT

ಮಠದ ಕಾಮದುಘಾ ವಿಭಾಗದ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ,  ಅಭಯಾಕ್ಷರ ಅಭಿಯಾನ ಹಾಗೂ ಹಾಲುಹಬ್ಬದ ಬಗ್ಗೆ ವಿವರಿಸಿ, ‘ರಾಷ್ಟ್ರಮಟ್ಟದಲ್ಲಿ ಗೋಹತ್ಯೆ ನಿಷೇಧ ಆಗಲೇಬೇಕು ಎಂಬ ಹಕ್ಕೊತ್ತಾಯ ಮಂಡಿಸಲು ಚಾತುರ್ಮಾಸ್ಯ ಅವಧಿಯಲ್ಲೇ ಬೆಂಗಳೂರಿನ ಒಂದು ಕೋಟಿ ಜನರ ಸಹಿ ಸಂಗ್ರಹಿಸುವ ವಿಶಿಷ್ಟ ಅಭಿಯಾನ ಇದು. ರಾಜ್ಯದಲ್ಲಿ ಐದು ಕೋಟಿಗೂ ಅಧಿಕ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ’ ಎಂದರು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಹಾಲುಹಬ್ಬ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.