ಬೆಂಗಳೂರು: ‘ಕನ್ನಡ ಭಾಷೆ, ನಾಡು ಹಾಗೂ ಸಾಹಿತ್ಯದ ಪರ ಕೆಲಸ ಮಾಡುವವರು ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಯಾರನ್ನೂ ದೂಷಣೆ ಮಾಡಬಾರದು’ ಎಂದು ಹಿರಿಯ ಲೇಖಕ ಟಿ.ಆರ್.ಮಹದೇವಯ್ಯ ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ– 188’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ನಾಡು ನುಡಿಗಾಗಿ ಕೆಲಸ ಮಾಡುತ್ತಿರುವ ಹೋರಾಟಗಾರರ ನೆರವಿಗೆ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ಬರಬೇಕು’ ಎಂದರು.
‘ನಾನು ಬಹಳ ಒಳ್ಳೆ ಕಾಲದಲ್ಲಿ ಮೇಷ್ಟ್ರಾಗಿದ್ದೆ. ಆ ಸಮಯದಲ್ಲಿ ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ನಡುವೆ ಅನ್ಯೋನ್ಯತೆ ಇತ್ತು. ವಿದ್ಯಾರ್ಥಿಗಳ ಶ್ರದ್ಧೆ ನೋಡಿ ಹತ್ತು ಪಟ್ಟು ಹೆಚ್ಚು ಪಾಠ ಹೇಳಬೇಕು ಅನಿಸುತ್ತಿತ್ತು. ಆದರೆ, ಇಂದು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೋದರೆ ನಮ್ಮ ಕತೆ ಗೋವಿಂದ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಇಂಗ್ಲಿಷ್ ಪದ ಬಳಕೆ ಜಾಸ್ತಿಯಾಗಿದೆ. ಈ ಮೂಲಕ ಪತ್ರಕರ್ತರು ಬಹುಭಾಷಾ ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ. ಹೀಗಾದರೆ ಸತ್ವವುಳ್ಳ ಕನ್ನಡದ ನುಡಿಪುಂಜಗಳು ಏನಾಗಬೇಕು. ಸಮೂಹ ಮಾಧ್ಯಮಕ್ಕೆ ಹೇಳುವವರು ಯಾರು’ ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.