ADVERTISEMENT

ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ನೆಲಮಂಗಲ: ಹದಗೆಟ್ಟಿರುವ ರಸ್ತೆ ಮತ್ತು ಕೆರೆಗಳ ಅಭಿವೃದ್ಧಿ ಜತೆಗೆ, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಂ.ವಿ.ನಾಗರಾಜು ತಿಳಿಸಿದರು.

ಸ್ಥಳೀಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ರೋಜ್‌ಗಾರ್ ಯೋಜನೆಯಡಿ `ನಮ್ಮ ಗ್ರಾಮ ನಮ್ಮ ರಸ್ತೆ~ ಅಭಿವೃದ್ಧಿಗೆ ಹತ್ತು ಗ್ರಾಮಗಳಲ್ಲಿ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

 ತಾಲ್ಲೂಕಿನ ಹಲವು ಕೆರೆಗಳೂ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ಗದ್ದಿಗೆಮಠದ ರಸ್ತೆ, ಗಾಂಧಿ ಗ್ರಾಮದಿಂದ ಕುಣಿಗಲ್ ರಸ್ತೆ, ಚೌಡಸಂದ್ರದಿಂದ ಗುರುವನಹಳ್ಳಿ- ಹೊಸಹಳ್ಳಿ ರಸ್ತೆ, ಶಾಂತೇಗೌಡನಪಾಳ್ಯದಿಂದ ಹೆಗ್ಗುಂದ- ದಾಸೇನಹಳ್ಳಿ ರಸ್ತೆ, ತ್ಯಾಮಗೊಂಡ್ಲು- ಟಿ.ಬೇಗೂರು ರಸ್ತೆ, ಗುರುವನಹಳ್ಳಿಯಿಂದ ಮಹಿಮಾಪುರ- ಮಾಗಡಿ ರಸ್ತೆ, ನಿಜಗಲ್‌ನಿಂದ ಹೆದ್ದಾರಿ 4ಕ್ಕೆ, ಹತ್ತುಕುಂಟೆಪಾಳ್ಯದಿಂದ ಕೊಡಿಗೇಹಳ್ಳಿ ರಸ್ತೆ, ಕೊತ್ತನಹಳ್ಳಿಯಿಂದ ಗೊರವನಹಳ್ಳಿ ಹೊಸಹಳ್ಳಿ ರಸ್ತೆ ಸೇರಿದಂತೆ 4.84 ಕಿ.ಮೀ.ಗಳ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ, ಕೆ.ಜಿ. ಶ್ರೀನಿವಾಸಪುರ, ದೊಡ್ಡಚೆನ್ನಹಳ್ಳಿ, ಚಿಕ್ಕಮಾರನಹಳ್ಳಿಗಳಲ್ಲಿ 5.01 ಕಿ.ಮೀ ರಸ್ತೆ ಕಾಮಗಾರಿ ಅರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

 ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿ ಸೂರನ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುಬ್ಬಣ್ಣ, ಮಹಿಳಾ ಮೋರ್ಚಾದ ರಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.