ADVERTISEMENT

ಚರ್ಮೋದ್ಯಮ ಕಾರ್ಮಿಕರಿಗೆ 500 ಪೆಟ್ಟಿಗೆ ಅಂಗಡಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 20:05 IST
Last Updated 9 ಅಕ್ಟೋಬರ್ 2012, 20:05 IST

ಬೆಂಗಳೂರು: ಚರ್ಮ ಕುಶಲಕರ್ಮಿಗಳಿಗೆ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಪ್ರವಾಸಿ ತಾಣಗಳಲ್ಲಿ ಸುಮಾರು 500 ಪೆಟ್ಟಿಗೆ ಅಂಗಡಿಗಳನ್ನು ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಚರ್ಮೋದ್ಯಮದ ಕುಶಲಕರ್ಮಿಗಳೊಂದಿಗೆ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಮಂಗಳವಾರ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದರು. ಈ ಉದ್ದೇಶಕ್ಕಾಗಿ ಪ್ರತಿ ಅಂಗಡಿಗೆ ರೂ 90 ಸಾವಿರದಂತೆ ಒಟ್ಟು ರೂ 5 ಕೋಟಿ ತೆಗೆದಿರಿಸಲಾಗಿದೆ ಎಂದರು.

ಅಂಗಡಿ ಸ್ಥಾಪಿಸಲು ಸರ್ಕಾರದಿಂದ ರೂ 50 ಸಾವಿರವನ್ನು ಸಬ್ಸಿಡಿ ರೂಪದಲ್ಲಿ ಹಾಗೂ ರೂ 30 ಸಾವಿರ ಸಾಲವಾಗಿ ನೀಡಲಾಗುವುದು. ಉಳಿದ ಹಣವನ್ನು ಕುಶಲಕರ್ಮಿಗಳು ತಾವೇ ಹೊಂದಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಕೆಲವು ಪ್ರಮುಖ ಸ್ಥಳಗಳಿಂದ ಚರ್ಮ ಕುಶಲಕರ್ಮಿಗಳನ್ನು ಒಕ್ಕಲೆಬ್ಬಿಸಬಾರದು ಎಂಬ ಸೂಚನೆಯನ್ನು ನಗರಾಭಿವೃದ್ಧಿ ಇಲಾಖೆಗೆ ನೀಡಲಾಗುವುದು. ಅಲ್ಲದೆ ಅವರ ಅಂಗಡಿಗಳಲ್ಲಿ ಜಾಹೀರಾತು ಪ್ರದರ್ಶಿಸಲು ಅನುಮತಿ ನೀಡಲಾಗುವುದು ಎಂದು ಹೇಳಿದರು.

ಈ ಅಂಗಡಿಗಳಲ್ಲಿ ಚಪ್ಪಲಿ, ಷೂ ರಿಪೇರಿ ಮಾತ್ರವಲ್ಲದೆ, ಅವರೇ ಸಿದ್ಧಪಡಿಸಿದ ಚರ್ಮೋತ್ಪನ್ನಗಳನ್ನು ಮಾರಾಟ ಮಾಡಬಹುದು. 87 ಹಳೆ ಅಂಗಡಿಗಳನ್ನು ನವೀಕರಿಸಲಾಗುವುದು. ಉಳಿದ ಅಂಗಡಿಗಳಿಗೂ ಜಾಗವನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.