ADVERTISEMENT

ಚಾಕುವಿನಿಂದ ಇರಿದು ಟೆಕಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಪ್ರಣಯ್‌
ಪ್ರಣಯ್‌   

ಬೆಂಗಳೂರು: ತಾವರೆಕೆರೆ ಮುಖ್ಯರಸ್ತೆಯಲ್ಲಿ ಪ್ರಣಯ್ ಮಿಶ್ರಾ (24) ಎಂಬುವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭಾನುವಾರ ರಾತ್ರಿ ಕೊಲೆ ಮಾಡಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಒಡಿ‌ಶಾದ ಪ್ರಣಯ್‌, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಅಸೆಂಚರ್‌ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಸುದ್ದುಗುಂಟೆಪಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.

‘ಭಾನುವಾರ ರಾತ್ರಿ ಬೇಗೂರಿನಲ್ಲಿರುವ ಸ್ನೇಹಿತನ ಕೊಠಡಿಗೆ ಹೋಗಿದ್ದ ಪ್ರಣಯ್‌, ಪಾರ್ಟಿ ಮಾಡಿದ್ದರು. ತಡರಾತ್ರಿ 2 ಗಂಟೆಯ ಸುಮಾರಿಗೆ ಸ್ನೇಹಿತ, ಅವರನ್ನು ಕ್ಯಾಬ್‌ನಲ್ಲಿ ಕರೆತಂದು ಸುದ್ದುಗುಂಟೆಪಾಳ್ಯದ ಮನೆಗೆ ಬಿಟ್ಟು ಹೋಗಿದ್ದರು’ ‘ಅದಾದ ಗಂಟೆ ಬಳಿಕ ಬಿ.ಟಿ.ಎಂ ಲೇಔಟ್‌ನಲ್ಲಿರುವ ಸ್ನೇಹಿತೆಗೆ ಕರೆ ಮಾಡಿದ್ದ ಪ್ರಣಯ್‌, ಅವರ ಮನೆಗೆ ಹೋಗುವುದಾಗಿ ಹೇಳಿದ್ದರು.

ADVERTISEMENT

ಬಳಿಕ ಬೈಕ್‌ನಲ್ಲಿ ತಾವರೆಕೆರೆ ಮುಖ್ಯರಸ್ತೆ ಮಾರ್ಗವಾಗಿ ಹೊರಟಿದ್ದರು. ಚಾಕೊಲೇಟ್‌ ಫ್ಯಾಕ್ಟರಿ ಬಳಿ ಒಬ್ಬಂಟಿಯಾಗಿ ಹೋಗುತ್ತಿದ್ದ ಅವರನ್ನು ಅಡ್ಡಗಟ್ಟಿದ್ದ ಇಬ್ಬರು ದುಷ್ಕರ್ಮಿಗಳು, ಮೈಮೇಲೆ ಎರಗಿದ್ದರು. ಆಗ ಪ್ರಣಯ್‌ ಸ್ಥಳದಿಂದ ಓಡಲು ಆರಂಭಿಸಿದ್ದರು. ಬೆನ್ನಟ್ಟಿದ್ದ ದುಷ್ಕರ್ಮಿಗಳು ಚಾಕುವಿನಿಂದ ಅವರ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಣಯ್‌ನನ್ನು ಕಂಡ ಸ್ಥಳೀಯರು, ಅಪಘಾತವಾಗಿರಬಹುದು ಎಂದು ತಿಳಿದು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆಯೇ ಅವರು ಅಸುನೀಗಿರುವುದಾಗಿ ವೈದ್ಯರು ತಿಳಿಸಿದರು’ ಎಂದು ವಿವರಿಸಿದರು.

ಸ್ನೇಹಿತೆಯಿಂದ ಕರೆ: ‘ಮನೆಗೆ ಬರುತ್ತೇನೆ ಎಂದಿದ್ದ ಪ್ರಣಯ್‌, ಗಂಟೆ ಕಳೆದರೂ ಬಾರದಿದ್ದಾಗ ಸ್ನೇಹಿತೆಯು ಅವರ ಮೊಬೈಲ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ಸಾರ್ವಜನಿಕರು, ಪ್ರಣಯ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪ್ರಣಯ್ ಬಳಿ ಮೊಬೈಲ್, ಪರ್ಸ್ ಎಲ್ಲವೂ ಹಾಗೇ ಇದೆ. ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ ಎನ್ನಲು ಸಾಧ್ಯವಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.