ಬೆಂಗಳೂರು: ಜಗದ್ವಿಖ್ಯಾತ ಕಲಾವಿದ ಮೈಸೂರು ವೀಣೆ ಶೇಷಣ್ಣನವರ ಭಾವಚಿತ್ರವನ್ನು ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಇತ್ತೀಚೆಗೆ ಅನಾವರಣ ಮಾಡಲಾಯಿತು. ವೈಣಿಕ ಶಿಖಾಮಣಿ ಶೇಷಣ್ಣನವರ ಸುಂದರ ವರ್ಣಚಿತ್ರವನ್ನು ಹಿರಿಯ ಸಂಗೀತ ವಿಮರ್ಶಕ ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯ ಅವರಿಂದ ಅಕಾಡೆಮಿಯ ಅಧ್ಯಕ್ಷ ಎನ್. ಮುರಳಿ ಅವರು ಸ್ವೀಕರಿಸಿ ಅನಾವರಣಗೊಳಿಸಿದರು.
ಅಕಾಡೆಮಿಯ 85ನೇ ಸಂಗೀತ ಸಮ್ಮೇಳನದ ವಿದ್ವತ್ ಗೋಷ್ಠಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ.ತಿರುಚಿ ಶಂಕರನ್ ಹಾಗೂ ಕಾರ್ಯದರ್ಶಿ ಡಾ. ಪಪ್ಪು ವೇಣುಗೋಪಾಲರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವೀಣೆ ಶೇಷಣ್ಣನವರ ರಚನೆಗಳ ತಮಿಳು ಅವತರಣಿಕೆಯನ್ನೂ ಅನಾವರಣಗೊಳಿಸಲಾಯಿತು.
ಪ್ರೊ. ಮಿತ್ರ ಕೆಐಐಟಿ ವಿ.ವಿ ಕುಲಪತಿ
ಭುವನೇಶ್ವರ: ಒಡಿಶಾದ ಕೆಐಐಟಿ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಬೆಂಗಳೂರಿನ ಕಾನೂನು ತಜ್ಞ ಪ್ರೊ. ಎನ್.ಎಲ್.ಮಿತ್ರ ಅಧಿಕಾರ ವಹಿಸಿಕೊಂಡಿದ್ದಾರೆ.
ಕಾನೂನು ಶಿಕ್ಷಣಕ್ಕೆ ಹೊಸ ದಿಕ್ಸೂಚಿ ನೀಡಿದ ಹೆಗ್ಗಳಿಕೆ ಮಿತ್ರ ಅವರಿಗಿದೆ. ಹಲವಾರು ರಾಷ್ಟ್ರೀಯ, ಅಂತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಮುಖ ಕಾನೂನು ಶಾಲೆಗಳಿಗೆ ಅವರು ಸಲಹೆಗಾರರಾಗಿದ್ದಾರೆ.
ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ (ಎನ್ಎಲ್ಎಸ್ಐಯು), ಜೋಧಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್ಎಲ್ಯು) ಕುಲಪತಿಯಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಅವರಿಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.